ಎನ್ ಸಿಪಿ ರಾಷ್ಟ್ರೀಯ ಸಮಾವೇಶ ಸಭೆಯಿಂದ ಏಕಾಏಕಿ ಹೊರನಡೆದ ಅಜಿತ್ ಪವಾರ್; ಪಕ್ಷದಲ್ಲಿ ಬಂಡಾಯದ ಊಹಾಪೋಹ!
ಮುಂಬೈ: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ ನಡೆದ ಎನ್ ಸಿಪಿ ರಾಷ್ಟ್ರೀಯ ಸಮಾವೇಶದ ಸಭೆಯಿಂದ ಹೊರನಡೆದಿದ್ದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನೆಯಾಗಿದೆ.
ಪಕ್ಷದ ಹಿರಿಯ ಮುಖಂಡನಾಗಿದ್ದರೂ ಎನ್ ಸಿಪಿಯ ವರಿಷ್ಠ ಶರದ್ ಪವಾರ್ ಎದುರೇ ಅಜಿತ್ ಪವಾರ್ ಏಕಾ ಏಕಿ ವೇದಿಕೆಯಿಂದ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ.
ಪಕ್ಷದ ಮತ್ತೋರ್ವ ನಾಯಕ ಜಯಂತ್ ಪಾಟೀಲ್ ಗೆ ತಮಗೂ ಮುನ್ನ ಮಾತನಾಡುವುದಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅಜಿತ್ ಪವಾರ್ ಈ ರೀತಿ ನಡೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಆಂತರಿಕ ಭಿನ್ನಮತದ ಊಹಾಪೋಹಗಳು ಎದುರಾಗಿದೆ.
ಆದರೆ ಈ ಬಳಿಕ ಅಜಿತ್ ಪವಾರ್ ಸ್ಪಷ್ಟನೆ ನೀಡಿದ್ದು, ಅದು ರಾಷ್ಟ್ರೀಯ ಸಮಾವೇಶವಾಗಿದ್ದರಿಂದ ನಾನು ಮಾತನಾಡಲಿಲ್ಲ ಎಂದು ಹೇಳಿದ್ದಾರೆ. ಎನ್ ಸಿಪಿ ಸಂಸದ ಪ್ರಫುಲ್ ಪಟೇಲ್ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸಮಾರೋಪ ಸಂದೇಶಕ್ಕಿಂತಲೂ ಮುನ್ನ ಮಾತನಾಡಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಶರದ್ ಪವಾರ್ ಮಾತನಾಡುವ ವೇಳೆಗೆ ಆಗಲೇ ಅಜಿತ್ ಪವಾರ್ ವೇದಿಕೆಯಿಂದ ನಿರ್ಗಮಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ