ನವದೆಹಲಿ: ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು, ಬೆದರಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ 14 ಪ್ರತಿಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠ, ವಾಸ್ತವಿಕ ಸಂದರ್ಭಗಳು ಇಲ್ಲದೆಯೇ ಸಾಮಾನ್ಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ತಮ್ಮ ಅರ್ಜಿಯನ್ನು ಪುರಸ್ಕರಿಸಲು ಸರ್ವೋಚ್ಚ ನ್ಯಾಯಾಲಯದ ನಿರಾಸಕ್ತಿ ತೋರುತ್ತಿರುವುದನ್ನು ಮನಗಂಡ ಪ್ರತಿಪಕ್ಷಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎ ಎಂ ಸಿಘ್ವಿ, ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಹೀಗಾಗಿ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
"ನೀವು ವೈಯಕ್ತಿಕ ಕ್ರಿಮಿನಲ್ ಪ್ರಕರಣ ಅಥವಾ ಪ್ರಕರಣಗಳ ಗುಂಪು ಇದ್ದಾಗ ದಯವಿಟ್ಟು ನಮ್ಮ ಬಳಿಗೆ ಬನ್ನಿ" ಎಂದು ಪೀಠ ಹೇಳಿದೆ.
ಪ್ರತಿಪಕ್ಷಗಳ ಪರವಾಗಿ ವಾದ ಮಂಡಿಸಿದ ಅಭಿಶೇಕ್ ಮನು ಸಿಂಘ್ವಿ, 2014 ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿಪಕ್ಷಗಳ ನಾಯಕರ ವಿರುದ್ಧ ದಾಖಲಾಗುವ ಜಾರಿ ನಿರ್ದೇಶನಾಲಯದ ಪ್ರಕರಣಗಳು ಹಾಗೂ ಸಿಬಿಐ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ ಎಂದು ಹೇಳಿದರು.
ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಜಾರಿ ನಿರ್ದೇಶನಾಲಯ 7 ವರ್ಷಗಳಲ್ಲಿ 6 ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಈ ಪ್ರಕರಣಗಳ ಪೈಕಿ ಶೇ.23 ರಷ್ಟು ಮಾತ್ರ ಅಪರಾಧಕ್ಕೆ ಶಿಕ್ಷೆ ಕೊಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಎದುರು ಅಂಕಿ-ಅಂಶಗಳನ್ನು ಬಿಚ್ಚಿಟ್ಟಿದ್ದರು.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳಲ್ಲಿ ದಾಖಲಾಗಿರುವ ಶೇ.95 ರಷ್ಟು ಪ್ರಕರಣಗಳು ದೇಶಾದ್ಯಂತ ಇರುವ ವಿಪಕ್ಷಗಳ ರಾಜಕಾರಣಿಗಳ ವಿರುದ್ಧವೇ ಆಗಿದೆ. ಇದು ರಾಜಕಾರಣಿಗಳ ವಿರುದ್ಧದ ದ್ವೇಷದ ರಾಜಕಾರಣವಾಗಿದೆ ಎಂದು ಆರೋಪಿಸಿದರು.
Advertisement