ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ನವಿ ಮುಂಬೈನಲ್ಲಿ ಭಾನುವಾರ ನಡೆದ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಮತ್ತು 50ಕ್ಕೂ ಹೆಚ್ಚು ಜನ ವಾಣಿಜ್ಯ ನಗರಿಯ ವಿವಿಧ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಸಿಲಿನ ತಾಪದಿಂದ ನೂರಾರು ಜನ ತೀವ್ರ ಅಸ್ವಸ್ಥರಾಗಿದ್ದು, ಖಾರ್ಘರ್ ಮತ್ತು ಸುತ್ತಮುತ್ತಲಿನ ಐದು ಆಸ್ಪತ್ರೆಗಳಲ್ಲಿ 44 ಜನರನ್ನು ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾದ ಈ ಮೆಗಾ ಕಾರ್ಯಕ್ರಮದಲ್ಲಿ ನಿನ್ನೆ 120ಕ್ಕೂ ಹೆಚ್ಚು ಜನ ಬಿಸಿಲಿನ ಝಳದಿಂದ ಡಿಹೈಡ್ರೇಶನ್ ಹಾಗೂ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಲ್ಲಿ 15ಕ್ಕೂ ಹೆಚ್ಚು ಜನರನ್ನು ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಖಾರ್ಘರ್ನ 306 ಎಕರೆ ವಿಸ್ತಾರವಾದ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಪ್ಪಾಸಾಹೇಬ್ ಧರ್ಮಾಧಿಕಾರಿಯ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು.
ಮಹಾರಾಷ್ಟ್ರ ಸರ್ಕಾರ ನೀಡುವ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧರ್ಮಾಧಿಕಾರಿಗೆ ಪ್ರದಾನ ಮಾಡಿದರು.
ಈ ಕಾರ್ಯಕ್ರಮ ನಡೆದ ಪ್ರದೇಶದಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಹೀಟ್ ವೇವ್ ಎನ್ನುವುದು ಗಾಳಿಯ ಉಷ್ಣತೆಯಾಗಿದ್ದು, ಇದಕ್ಕೆ ಒಡ್ಡಿಕೊಂಡಾಗ ಮಾನವ ದೇಹಕ್ಕೆ ಮಾರಕವಾಗುತ್ತದೆ. ಎಂದು ಭಾರತೀಯ ಹವಾಮಾನ ಇಲಾಖೆ(IMD) ಹೇಳಿದೆ.
Advertisement