ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಾ ಹೈಕೋರ್ಟ್ ಹೆಸರು ಬದಲಾಯಿಸುವ ಯೋಚನೆ ಇಲ್ಲ: ಕೇಂದ್ರ

ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳ ಹೆಸರು ಬದಲಾಯಿಸುವ ಯಾವುದೇ ಯೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ. 
ಅರ್ಜುನ್ ರಾಮ್ ಮೇಘವಾಲ್
ಅರ್ಜುನ್ ರಾಮ್ ಮೇಘವಾಲ್

ನವದೆಹಲಿ: ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳ ಹೆಸರು ಬದಲಾಯಿಸುವ ಯಾವುದೇ ಯೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ. 

ತಮಿಳುನಾಡಿನ ರಾಜ್ಯಸಭಾ ಸದಸ್ಯ ಸಿವಿ ಷಣ್ಮುಗಂ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಮದ್ರಾಸ್(ಹೆಸರಿನ ಬದಲಾವಣೆ) ಕಾಯಿದೆ, 1996ರ ಅಡಿಯಲ್ಲಿ, ಮದ್ರಾಸ್ ನಗರವನ್ನು ಚೆನ್ನೈ ಎಂದು ಮರುನಾಮಕರಣ ಮಾಡಲಾಯಿತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ 1997ರಲ್ಲಿ ಮದ್ರಾಸ್ ಹೈಕೋರ್ಟ್ ಹೆಸರನ್ನು ಚೆನ್ನೈ ಹೈಕೋರ್ಟ್ ಎಂದು ಬದಲಾಯಿಸುವ ಪ್ರಸ್ತಾವನೆ ಕಳುಹಿಸಿತ್ತು ಎಂದು ಇತಿಹಾಸವನ್ನು ನೆನಪಿಸಿಕೊಂಡರು.

ಆ ವೇಳೆಗೆ ಬಾಂಬೆ ಮತ್ತು ಕಲ್ಕತ್ತಾದ ಹೆಸರುಗಳು ಸಹ ಬದಲಾಗಿದ್ದವು. ಬಾಂಬೆ, ಕಲ್ಕತ್ತಾ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಹೆಸರನ್ನು ಕ್ರಮವಾಗಿ ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಹೈಕೋರ್ಟ್‌ಗಳಾಗಿ ಬದಲಾಯಿಸಲು ಕೇಂದ್ರ ಸರ್ಕಾರ "ಹೈಕೋರ್ಟ್ಸ್(ಹೆಸರುಗಳ ಬದಲಾವಣೆ) ಮಸೂದೆ 2016" ಎಂಬ ಮಸೂದೆ ತಂದಿತು. ಇದನ್ನು ಜುಲೈ 19, 2016 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು ಎಂದು ಸಚಿವರು ಹೇಳಿದರು.

ಏತನ್ಮಧ್ಯೆ ಒರಿಸ್ಸಾದ ಹೆಸರನ್ನು ಒಡಿಶಾ ಮತ್ತು ಗೌಹಾಟಿಯನ್ನು ಗುವಾಹಟಿ ಎಂದು ಬದಲಾಯಿಸಲಾಯಿತು. ನಂತರ ಸಂಬಂಧಿತ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳೊಂದಿಗೆ ಸಮಾಲೋಚನೆ ನಡೆಸಿದಾಗ ಮಿಶ್ರ ಪ್ರತಿಕ್ರಿಯೆ ಬಂದಿದೆ ಎಂದು ಮೇಘವಾಲ್ ಅವರು ತಿಳಿಸಿದರು.

ಮದ್ರಾಸ್ ಹೈಕೋರ್ಟ್ ಹೆಸರನ್ನು ತಮಿಳುನಾಡು ಹೈಕೋರ್ಟ್ ಎಂದು ಬದಲಾಯಿಸುವಂತೆ ತಮಿಳುನಾಡು ಸರ್ಕಾರ ಸಲಹೆ ನೀಡಿದೆ. ಆದರೆ ಮದ್ರಾಸ್ ಹೈಕೋರ್ಟ್ ಈ ಪ್ರಸ್ತಾವನೆಯನ್ನು ಒಪ್ಪಲಿಲ್ಲ.

ಕಲ್ಕತ್ತಾ ಹೈಕೋರ್ಟ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸಹ ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಒಪ್ಪಲಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಪ್ರಸ್ತುತ, ಈ ವಿಷಯದ ಬಗ್ಗೆ ಕಾನೂನು ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com