ಮುಂಬೈ: ಎಲ್ಗಾರ್ ಪರಿಷದ್- ಮಾವೋವಾದಿಗಳ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ, ವೆರ್ನಾನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ನವಿ ಮುಂಬೈ ನ ವಿಶೇಷ ಕೋರ್ಟ್ ಆ.05 ರಂದು ಗೊನ್ಸಾಲ್ವಿಸ್ ಹಾಗೂ ಫೆರೇರಾ ಅವರ ಬಿಡುಗಡೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ವಾರದ ಹಿಂದೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಇಬ್ಬರೂ ಕಾರ್ಯಕರ್ತರನ್ನು ತಳೋಜಾ ಜೈಲಿನಲ್ಲಿರಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾಗುವಾಗ ಕಾರ್ಯಕರ್ತರ ಕೆಲವು ಬೆಂಬಲಿಗರು ಅವರನ್ನು ಬರಮಾಡಿಕೊಂಡರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇವರಿಬ್ಬರ ಬಿಡುಗಡೆಯಿಂದಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 16 ಆರೋಪಿಗಳ ಪೈಕಿ 5 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. 16 ಆರೋಪಿಗಳಲ್ಲಿ ಒಬ್ಬ, ಜೆಸ್ಯೂಟ್ ಪಾದ್ರಿ ಸ್ಟಾನ್ ಸ್ವಾಮಿ - ಜುಲೈ 2021 ರಲ್ಲಿ ನ್ಯಾಯಾಂಗ ಬಂಧನದ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Advertisement