ಮಹಾರಾಷ್ಟ್ರ: ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಇತ್ತೀಚಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಜೊತೆಗಿನ ಭೇಟಿಯು ರಾಜಕೀಯ ವಲಯಗಳಲ್ಲಿ ಗೊಂದಲ ಮೂಡಿಸಿರುವಂತೆಯೇ ಅವರು ವಿರೋಧ ಪಕ್ಷದ ಮೈತ್ರಿ ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿದರೆ ಕೇಂದ್ರ ಸಚಿವ ಸ್ಥಾನವನ್ನು ನೀಡಲಾಗುವುದು ಎಂಬ ಆಫರ್ ತಿರಸ್ಕರಿಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಮಣಿಪುರ ವಿಚಾರದಲ್ಲಿ ಪ್ರಧಾನಿ ಧೋರಣೆ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ಮಣಿಪುರ ಪರಿಸ್ಥಿತಿ ಕುರಿತು ಮೋದಿ ಚಿಂತಿಸಿಲ್ಲ. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಮೋದಿ ಸರ್ಕಾರ ಮೂಕಪ್ರೇಕ್ಷಕವಾಗಿದೆ. ಈಶಾನ್ಯ ಪ್ರದೇಶವ ಪ್ರಮುಖ ಮತ್ತು ಸೂಕ್ಷ್ಮವಾಗಿದೆ. ಚೀನಾದ ಗಡಿಯಲ್ಲಿರುವ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಸಂಸತ್ತಿನ ಹೊರಗೆ ಮಾತನಾಡಿದ ಪ್ರಧಾನಿ ಮೋದಿ, ಮಾನ್ಸೂನ್ ಅಧಿವೇಶನದ ಮೊದಲ ದಿನ ಮೂರು ನಿಮಿಷಗಳ ವೀಡಿಯೊ ಸಂದೇಶವನ್ನು ನೀಡಿದರು ಮತ್ತು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ತಮ್ಮ ಸುದೀರ್ಘ ಉತ್ತರದಲ್ಲಿ ಮಣಿಪುರದ ಬಗ್ಗೆ ಹೆಚ್ಚಾಗಿ ಮಾತನಾಡಿಲ್ಲ ಎಂದು ಟೀಕಿಸಿದರು.
ಮೋದಿ ಮಣಿಪುರಕ್ಕೆ ಹೋಗಿ ಜನರಿಗೆ ವಿಶ್ವಾಸ ನೀಡಬೇಕು, ಆದರೆ ಅವರು ಅದನ್ನು ಮುಖ್ಯವೆಂದು ಭಾವಿಸಲಿಲ್ಲ. ಬದಲಿಗೆ, ಅವರು ಮಧ್ಯಪ್ರದೇಶದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Advertisement