ನವದೆಹಲಿ: ರೈಲಿನಲ್ಲಿ ತಮ್ಮ ಹಿರಿಯ ಅಧಿಕಾರಿ ಹಾಗೂ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಡಿ ಸೇವೆಯಿಂದ ವಜಾಗೊಂಡಿರುವ ಆರ್ ಪಿಎಫ್ ಪೇದೆ ಚೇತನ್ ಸಿಂಗ್ ಚೌಧರಿ ವಿರುದ್ಧ 2017 ರಲ್ಲಿ ಮುಸ್ಲಿಂ ವ್ಯಕ್ತಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ.
ಇದಷ್ಟೇ ಅಲ್ಲದೇ ಆತನ ವಿರುದ್ಧ ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪ ಕೇಳಿಬಂದಿದೆ. ಚೌಧರಿಯನ್ನು ವಜಾಗೊಳಿಸುವುದಕ್ಕೆ ಸೋಮವಾರ ರೈಲ್ವೆ ರೈಲ್ವೆ ರಕ್ಷಣಾ ಪಡೆ (ಆರ್ ಪಿಎಫ್) ನ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಆದೇಶ ಹೊರಡಿಸಿದ್ದರು.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಚೌಧರಿ 2017 ರಲ್ಲಿ ಮಧ್ಯಪ್ರದೇಶದ ಉಜ್ಜೈನ್ ನ ಶ್ವಾನದಳದ ಭಾಗವಾಗಿದ್ದರು. ಆ ಸಂದರ್ಭದಲ್ಲಿ ಓರ್ವ ಮುಸ್ಲಿಂ ವ್ಯಕ್ತಿಯನ್ನು ಆರ್ ಪಿಎಫ್ ಪೋಸ್ಟ್ ಗೆ ಕರೆ ತಂದು ಕಾರಣವಿಲ್ಲದೇ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಕಿರುಕುಳದ ಕುರಿತು ಚೌಧರಿ ವಿರುದ್ಧ ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಶಿಸ್ತಿನ ನಿಯಮಗಳ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಷ್ಟೇ ಅಲ್ಲದೇ ಗುಜರಾತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಚೌಧರಿ ತಮ್ಮ ಸಹೋದ್ಯೋಗಿಯೋರ್ವರಿಗೆ ಕಿರುಕುಳ ನೀಡಿದ್ದರು ಮತ್ತೊಂದು ಪ್ರಕರಣದಲ್ಲಿ ಆತ ಸಹ್ಯೋದ್ಯೋಗಿಯ ಎಟಿಎಂ ಕಾರ್ಡ್ ಬಳಕೆ ಮಾಡಿ ಹಣ ತೆಗೆದಿದ್ದರು ಎಂದು ತಿಳಿದುಬಂದಿದೆ. ಆದರೆ ರೈಲಿನಲ್ಲಿ ಹತ್ಯೆ ಮಾಡಿದ ಘಟನೆಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
Advertisement