ಸಹರಾನ್ಪುರ: ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಜಿಮ್ಗೆ ಹೋಗಿದ್ದ 12ನೇ ತರಗತಿಯ ವಿದ್ಯಾರ್ಥಿಯನ್ನು ಐವರು ಕೋಲುಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹತ್ಯೆಯಾದ ವಿದ್ಯಾರ್ಥಿಯನ್ನು ಅಜಯ್ ಕುಮಾರ್(19) ಎಂದು ಗುರುತಿಸಲಾಗಿದೆ. ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಸಾಗರ್ ಜೈನ್ ತಿಳಿಸಿದ್ದಾರೆ.
ಆಗಸ್ಟ್ 26 ರಂದು ಕುಮಾರ್ ತನ್ನ ಸ್ನೇಹಿತ ಶೋಯೆಬ್ ಜೊತೆ ಜಿಮ್ಗೆ ಹೋದಾಗ ಈ ಘಟನೆ ನಡೆದಿದ್ದು, ಕೆಲವು ಜನ ಕುಮಾರ್ ನನ್ನು ಜಿಮ್ ನಿಂದ ಜಮೀನಿಗೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಘಟನೆಯ ವಿಷಯ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ, ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕುಮಾರ್ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಅಜಯ್, ವಿಶಾಲ್, ಶೇಖರ್, ಸೂರಜ್ ಮತ್ತು ತನ್ವೀರ್ ಎಂಬ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಒಂದೂವರೆ ವರ್ಷಗಳಿಂದ ತನ್ನ ಸೊಸೆ ಮತ್ತು ಸಹೋದರಿಗೆ ಫೋನ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಕುಮಾರ್ನ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಆರೋಪಿ ಅಜಯ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
Advertisement