ಮುಂಬೈ: ಆನ್ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಂದ್ರಾದಲ್ಲಿರುವ ನಿವಾಸದ ಮುಂದೆ ಮಹಾರಾಷ್ಟ್ರ ಶಾಸಕ ಬಚ್ಚು ಕಡು ಮತ್ತು ಅವರ 22 ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದರು.
ಕ್ರಿಕೆಟ್ ದಿಗ್ಗಜನ ಮನೆ ಮುಂದೆ ಪ್ರತಿಭಟನೆ ನಡೆಸಿದ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಬೆಂಬಲಿಸುವ ಪ್ರಹಾರ್ ಜನಶಕ್ತಿ ಪಕ್ಷದ ಶಾಸಕ ಕಡು ಮತ್ತು ಅವರ ಬೆಂಬಲಿಗರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಕರೆದೊಯ್ದರು.
ಕಡು ಮತ್ತು 22 ಬೆಂಬಲಿಗರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸೆಕ್ಷನ್ 37(ನಿಷೇಧ ಆದೇಶ ಉಲ್ಲಂಘನೆ) ಮತ್ತು 135 (ಕಾನೂನು ಉಲ್ಲಂಘಿಸುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಯುವಕರನ್ನು ಹಾಳು ಮಾಡುವ ಆನ್ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಉತ್ತೇಜನ ನೀಡುತ್ತಿದ್ದಾರೆ. ಇದು ಯುವಕರ ಮೇಲೆ ಪರಿಣಾಮ ಬೀರುತ್ತಿದೆ. ತೆಂಡೂಲ್ಕರ್ಗೆ ಭಾರತ ರತ್ನ ತಕ್ಕುದಲ್ಲ ಎಂದು ಶಾಸಕ ಕಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement