ಸಂಸತ್ ಚಳಿಗಾಲದ ಅಧಿವೇಶನ: ವಿಪಕ್ಷಗಳಿಂದ ಗದ್ದಲ, ಮಧ್ಯಾಹ್ನ 12 ಗಂಟೆಯವರೆಗೂ ಲೋಕಸಭೆ ಮುಂದೂಡಿಕೆ
ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆ ಕುರಿತು ನೈತಿಕ ಸಮಿತಿ ಶಿಫಾರಸ್ಸು ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಯಿತು.
ಈ ಮಧ್ಯೆ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಕತ್ತಿಗೆ ಭಿತ್ತಿಪತ್ರ ಕಟ್ಟಿಕೊಳ್ಳುವ ಮೂಲಕ ಬಿಜೆಪಿ ಸಂಸದನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಇದು ಕೊನೆಯ ಪೂರ್ಣ ಅಧಿವೇಶನವಾಗಿದೆ ಮತ್ತು ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ಬಾಕಿ ಇರುವ ಬಿಲ್ ಗಳನ್ನು ತೆರವುಗೊಳಿಸಲು ಬಿಜೆಪಿ ಬಯಸಿದೆ.
ಸಂಸತ್ತಿನ ಮುಂದೆ ಬಾಕಿ ಉಳಿದಿರುವ ಮಸೂದೆಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯ ಜೊತೆಗೆ ಐಪಿಸಿ, ಕ್ರಿಮಿನಲ್ ದಂಡ ಸಂಹಿತೆ ಮತ್ತು ಸಾಕ್ಷಿ ಕಾಯ್ದೆಯನ್ನು ಬದಲಿಸುವ ಹೊಸ ಮಸೂದೆಗಳು ಸೇರಿವೆ.