ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ: ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

ಸಂಸತ್ತಿನಲ್ಲಿ ಬುಧವಾರ ಭಾರೀ ಭದ್ರತಾ ಲೋಪವಾಗಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳು ಲೋಕಸಭೆ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶಿಸಿದೆ.
ಲೋಕಸಭೆಯಲ್ಲಿ ಬಣ್ಣದ ಹೊಗೆ
ಲೋಕಸಭೆಯಲ್ಲಿ ಬಣ್ಣದ ಹೊಗೆ

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ಭಾರೀ ಭದ್ರತಾ ಲೋಪವಾಗಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳು ಲೋಕಸಭೆ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶಿಸಿದೆ.

'ಲೋಕಸಭಾ ಸಚಿವಾಲಯದ ಕೋರಿಕೆಯ ಮೇರೆಗೆ, ಸಂಸತ್ತಿನ ಭದ್ರತಾ ಲೋಪ ಘಟನೆಯ ಬಗ್ಗೆ ತನಿಖೆಗೆ MHA ಆದೇಶಿಸಿದೆ. ಸಿಆರ್‌ಪಿಎಫ್‌ನ ಡಿಜಿ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ಇತರ ಭದ್ರತಾ ಸಂಸ್ಥೆಗಳ ಸದಸ್ಯರು ಮತ್ತು ತಜ್ಞರೊಂದಿಗೆ ವಿಚಾರಣಾ ಸಮಿತಿ ರಚಿಸಲಾಗಿದೆ' ಎಂದು ಕೇಂದ್ರ ಗೃಹ ಸಚಿವಾಲಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಸಮಿತಿಯು ತನಿಖೆ ನಡೆಸಿ, ಲೋಪಗಳನ್ನು ಗುರುತಿಸುತ್ತದೆ ಮತ್ತು ಮುಂದಿನ ಕ್ರಮಗಳ ಬಗ್ಗೆ ಶಿಫಾರಸು ಮಾಡಲಿದೆ. ಅಲ್ಲದೆ ಸಮಿತಿಯು ಸಂಸತ್ತಿನಲ್ಲಿ ಭದ್ರತೆಯನ್ನು ಸುಧಾರಿಸುವ ಸಲಹೆಗಳನ್ನು ಒಳಗೊಂಡಂತೆ ಶಿಫಾರಸುಗಳ ವರದಿಯನ್ನು ಶೀಘ್ರವಾಗಿ ಸಲ್ಲಿಸುತ್ತದೆ ಎಂದು ಎಕ್ಸ್‌ನಲ್ಲಿ ತಿಳಿಸಲಾಗಿದೆ.

ಇಡೀ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಇಂದು ಸಂಸತ್ ಭವನಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲೋಕಸಭೆ ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಕೆಳಗೆ ಇಳಿದು ಬಂದು ಬಣ್ಣದ ಹೊಗೆ ಸಿಡಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ಆರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com