'ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಶ್ರೀರಾಮನ ಹೆಸರು ಘೋಷಣೆಯೊಂದೇ ಬಾಕಿ': ಸಂಜಯ್ ರಾವತ್ ಟೀಕೆ
ನವದೆಹಲಿ: ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಒಂದು ವಾರದ ಮೊದಲು ವಿವಿಧ ಕಾರ್ಯಕ್ರಮಗಳನ್ನು ಯೋಜಿಸಿದೆ.
ಜನವರಿ 17 ರಂದು ಬಲರಾಮನ ಮೂರ್ತಿ ಅಯೋಧ್ಯೆಗೆ ತಲುಪಲಿದೆ. ಅದೇ ದಿನ, ಸರಯೂ ನದಿಯ ನೀರನ್ನು ಕಲಶದಲ್ಲಿ ತೆಗೆದುಕೊಳ್ಳಲಾಗುತ್ತದೆ. ಜನವರಿ 18 ರಂದು ಗಣೇಶ ಪೂಜೆ ನಡೆಯಲಿದೆ. ಜನವರಿ 19 ರಂದು ಹೋಮ ನಡೆಯಲಿದೆ. ಜನವರಿ 20 ರಂದು ವಾಸ್ತು ಶಾಂತಿ ಹಾಗೂ 21 ರಂದು ರಾಮನ ಮೂರ್ತಿಗೆ ಅಭಿಷೇಕ ಜರುಗಲಿದೆ.
ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಟೀಕಿಸಿದ್ದಾರೆ. ಬಿಜೆಪಿ ಪಕ್ಷವು ರಾಮಮಂದಿರದ ಉದ್ಘಾಟನೆಯನ್ನು ಸ್ವಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದೆ. ಶೀಘ್ರದಲ್ಲೇ ರಾಮನನ್ನು ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸುವುದು ಮಾತ್ರ ಉಳಿದಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಶುದ್ಧತೆ ಇಲ್ಲ, ಕೇವಲ ರಾಜಕೀಯ ಉದ್ದೇಶ ತುಂಬಿದೆ ಎಂದು ಸಂಜಯ್ ರಾವುತ್ ವಾಗ್ದಾಳಿ ನಡೆಸಿದರು.
ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ರಾಮನನ್ನು ಲೋಕಸಭೆ ಅಭ್ಯರ್ಥಿ ಎಂದು ಘೋಷಿಸುವುದೊಂದೇ ಬಾಕಿ ಎಂದರು. ಸಂಜಯ್ ರಾವತ್ ಅವರು ಈ ಹಿಂದೆಯೂ ಅಯೋಧ್ಯೆ ರಾಮಮಂದಿರದ ವಿಚಾರದಲ್ಲಿ ಟೀಕೆ ಮಾಡಿದ್ದರು. ಈ ಸಮಾರಂಭಕ್ಕೂ ದೇಶಕ್ಕೂ ಯಾವುದೇ ಸಂಬಂಧವಿಲ್ಲ, ಇದು ಕೇವಲ ಬಿಜೆಪಿ ಕಾರ್ಯಕ್ರಮ ಎಂದು ಹೇಳಿದ್ದರು. ಬಿಜೆಪಿ ಕಾರ್ಯಕ್ರಮಗಳು ಮುಗಿದ ನಂತರವೇ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ