ಲಖನೌ: ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ ಜಾಮೀನಿನ ಮೇರೆಗೆ ಉತ್ತರ ಪ್ರದೇಶ ಜೈಲಿನಿಂದ ಹೊರಗೆ ಬಂದಿದ್ದಾರೆ. ನಿಷೇಧಿತ ಸಂಘಟನೆಯೊಂದಿಗೆ ನಂಟು ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಅವರನ್ನು 2020ರಲ್ಲಿ ಬಂಧಿಸಲಾಗಿತ್ತು. ಎರಡು ವರ್ಷಗಳ ನಂತರ ಇದೀಗ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ.
ಪಿಎಂಎಲ್ ಎ ಕಾಯ್ದೆಯಡಿ ಬಂಧಿತರಾಗಿದ್ದ ಸಿದ್ದಿಕಿ ಕಪ್ಪನ್ ತಲಾ 1 ಲಕ್ಷ ರೂ. ಗಳ ಎರಡು ಶ್ಯೂರಿಟಿಯನ್ನು ಲಖನೌ ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಬುಧವಾರ ಜಾಮೀನು ಸಿಕ್ಕಿತ್ತು. ಇಂದು ಬೆಳಗ್ಗೆ 9-15ರ ಸುಮಾರಿನಲ್ಲಿ ಅವರು ಜೈಲಿನಿಂದ ಹೊರಗೆ ಬಂದಿರುವುದಾಗಿ ಲಖನೌ ಜಿಲ್ಲಾ ಕಾರಾಗೃಹದ ಅಧಿಕಾರಿ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಿಕಿ,. 28 ತಿಂಗಳ ಬಳಿಕ ಜೈಲಿನಿಂದ ಹೊರಗೆ ಬಂದಿದ್ದೇನೆ. ನನ್ನನ್ನು ಬೆಂಬಲಿಸಿದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿತ್ತು. ಇದೀಗ ಸಂತೋಷವಾಗಿ ಜೈಲಿನಿಂದ ಹೊರಗೆ ಬಂದಿರುವುದಾಗಿ ಹೇಳಿದರು.
ಪತ್ರಕರ್ತ ಸಿದ್ದಿಕಿ ಕಪ್ಪನ್ ಉತ್ತರಪ್ರದೇಶದ ಹಾಥ್ರಸ್ ಪಟ್ಟಣದಲ್ಲಿ 2020 ಅಕ್ಟೋರ್ 5ರಂದು ದಲಿತ ಮಹಿಳೆ ಮೇಲೆ ಸಂಭವಿಸಿದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುದ್ದಿಯನ್ನು ಕವರ್ ಮಾಡಲೆಂದು ಹೋಗಿದ್ದಾಗ ಅವರೊಂದಿಗೆ ಇತರ ಮೂವರು ಪತ್ರಕರ್ತರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಈ ನಾಲ್ವರು ಪಿಎಫ್ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಕಾನೂನು ವ್ಯವಸ್ಥೆಯನ್ನು ಹಾಳು ಮಾಡುವ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ಆರೋಪವಾಗಿತ್ತು. ಅದರಂತೆ ಐಟಿ, ಯುಎಪಿಎ ಮತ್ತು ಇಪಿಸಿ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕಪ್ಪನ್ ವಿರುದ್ಧ ಪ್ರಕರಣಗಳು ದಾಖಲಾದವು. ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಸಿದ್ದಿಕಿ ಕಪ್ಪನ್ ಮೇಲೆ ಪ್ರಕರಣ ದಾಖಲಿಸಿತ್ತು.
Advertisement