ತ್ರಿಪುರಾ ವಿಧಾನಸಭೆ ಚುನಾವಣೆ: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸಿ; ಪಿಎಂ ಮೋದಿ-ಅಮಿತ್ ಶಾ ಮನವಿ
ನವದೆಹಲಿ: ತ್ರಿಪುರಾ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ದಾಖಲೆ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಪ್ರಜಾಪ್ರಭುತ್ವ ಹಬ್ಬವನ್ನು ಬಲಿಷ್ಠಗೊಳಿಸಿ, ಯುವಜನತೆ ಹೆಚ್ಚಿನ ಉತ್ಸಾಹ ತೋರಿಸಿ ಎಂದು ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ.
ತ್ರಿಪುರಾದ ದಲೈ ಜಿಲ್ಲೆಯ ಅಂಬಸ್ಸಾದಲ್ಲಿ ಮತ್ತು ಗೊಮಟಿಯಲ್ಲಿ ಫೆಬ್ರವರಿ 11ರಂದು ಪ್ರಧಾನ ಮಂತ್ರಿಗಳು ಪ್ರಚಾರ ಮಾಡಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆಯವರೆಗೆ ಮುಂದುವರಿಯಲಿದೆ.
ಗೃಹ ಸಚಿವ ಅಮಿತ್ ಶಾ ಸಹ ತ್ರಿಪುರಾ ಮತದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಸಮೃದ್ಧ ತ್ರಿಪುರಾ ರಚಿಸಲು ಕೈಜೋಡಿಸುವಂತೆ, ಅಭಿವೃದ್ಧಿ ಶೀಲ ಸರ್ಕಾರ ರಚಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಈ ಬಾರಿ ಕಾಂಗ್ರೆಸ್-ಸಿಪಿಎಂ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ಚುನಾವಣೆ ರೇಸ್ ಗೆ ತ್ರಿಣಮೂಲ ಕಾಂಗ್ರೆಸ್ ಸೇರಿಕೊಂಡಿದೆ. ತಿಪ್ರ ಮೊತಾ ಮೂರನೇ ಪಕ್ಷವಾಗಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.
ಈ ವರ್ಷ ಚುನಾವಣೆ ಕಾಣುತ್ತಿರುವ ಮೊದಲ ರಾಜ್ಯ ತ್ರಿಪುರಾವಾಗಿದೆ. ನಾಗಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಬಳಿಕ 5 ರಾಜ್ಯಗಳಲ್ಲಿ ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯಲಿದೆ.
ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಮತ ಎಣಿಕೆ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ.

