ಆತ್ಮಹತ್ಯೆ ಯತ್ನ ಟ್ವಿಟರ್ ಮೂಲಕ ತಿಳಿದ ಪೊಲೀಸರಿಂದ ವ್ಯಕ್ತಿಯ ರಕ್ಷಣೆ!
ಮುಂಬೈ: ವ್ಯಕ್ತಿಯೋರ್ವನ ಆತ್ಮಹತ್ಯೆ ಯತ್ನವನ್ನು ಟ್ವಿಟರ್ ಮೂಲಕ ತಿಳಿದ ಪೊಲೀಸರು ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವುದಾಗಿ ವ್ಯಕ್ತಿಯೋರ್ವ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪೊಲೀಸರು ಆತನಿಗೆ ಆಪ್ತ ಸಲಹೆ ನೀಡಿ ಮನಃಪರಿವರ್ತನೆ ಮಾಡಿದ್ದಾರೆ.
ಕಡಲೆ ಮಿಠಾಯಿ ಮಾರುತ್ತಿದ್ದ, ಚೆಂಬೂರ್ ಬಳಿ ಇರುವ ಚುನಾಭಟ್ಟಿ ನಿವಾಸಿಯಾಗಿರುವ ವ್ಯಕ್ತಿಗೆ ನಷ್ಟ ಉಂಟಾಗಿ, ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು.
ಟ್ವಿಟರ್ ನಲ್ಲಿ ಉದ್ದದ ಸಂದೇಶ ರವಾನಿಸಿದ್ದನ್ನು ಪೊಲೀಸರು ಗಮನಿಸಿದ್ದು, ಉದ್ಯಮ, ಇನ್ನಿತರ ಹಿನ್ನಡೆಗಳಿಂದ ತೀವ್ರವಾಗಿ ನೊಂದಿದ್ದ ಆತ, ಆತ್ಮಹತ್ಯೆಗೆ ನಿರ್ಧರಿಸಿದ್ದ.
ಕ್ರೈಮ್ ಬ್ರಾಂಚ್ ತಂಡ ಸೈಬರ್ ತಂಡಕ್ಕೆ ಮಾಹಿತಿ ರವಾನೆ ಮಾಡಿತ್ತು. ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಆತನನ್ನು ಸೈಬರ್ ವಿಭಾಗಕ್ಕೆ ಆಪ್ತಸಲಹೆಗಾಗಿ ಕರೆತರಲಾಗಿತ್ತು. 3 ಲಕ್ಷ ರೂಪಾಯಿ ಸಾಲದಲ್ಲಿ ಆತ ಸಿಲುಕಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ