ಭೋಪಾಲ್: ಕಳೆದ ಕೆಲವು ವಾರಗಳಿಂದ, ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಭಗವಾನ್ ಹನುಮಾನ್ ದೇವಸ್ಥಾನ ಬಾಗೇಶ್ವರ ಧಾಮದ ಯುವ ಪೀಠಾಧೀಶ್ವರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನನಗೆ ಬೆಂಬಲ ಕೊಡಿ ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು.
ಇದೀಗ ಅವರ ಕಿರಿಯ ಸಹೋದರ ಸೌರಭ್ ಅಲಿಯಾಸ್ ಶಾಲಿಗ್ರಾಮ್ ಸುದ್ದಿಯಲ್ಲಿದ್ದಾರೆ. ಆದರೆ ಕೆಟ್ಟ ಕಾರಣಗಳಿಗಾಗಿ. 26 ವರ್ಷದ ದೇವಮಾನವನ ಸಹೋದರ ಸೌರಭ್ ಅಲಿಯಾಸ್ ಶಾಲಿಗ್ರಾಮ್, ವೈರಲ್ ವೀಡಿಯೊದಲ್ಲಿ, ಛತ್ತರ್ಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ(ಎಸ್ಸಿ) ಮಹಿಳೆಯ ವಿವಾಹ ಸಮಾರಂಭವನ್ನು ಹಾಳು ಮಾಡಿದ್ದಾರೆ. ವೀಡಿಯೊದಲ್ಲಿ, ದೇವಮಾನವನ ಸಹೋದರ, ಕುಡಿದ ಅಮಲಿನಲ್ಲಿ, ದೇಶ ನಿರ್ಮಿತ ಪಿಸ್ತೂಲ್ನಿಂದ ಅತಿಥಿಗಳಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.
ಒಂದು ಕೈಯಲ್ಲಿ ಸಿಗರೇಟು ಮತ್ತು ಇನ್ನೊಂದು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡಿರುವ ಶಾಸ್ತ್ರಿ ಅವರ ಸಹೋದರ, ಅಪರಿಚಿತ ವ್ಯಕ್ತಿಯನ್ನು ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು ಮತ್ತು ಅವನತ್ತ ತೋರಿಸುತ್ತಿರುವುದನ್ನು ನೋಡಬಹುದು.
ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಹಾ ಗ್ರಾಮದಲ್ಲಿ ಫೆಬ್ರವರಿ 11 ರಂದು ದಲಿತ ದಂಪತಿಗಳಾದ ಆಕಾಶ್ ಮತ್ತು ಸೀತಾ ಅಹಿರ್ವಾರ್ ಅವರ ವಿವಾಹದಲ್ಲಿ ಈ ಘಟನೆ ನಡೆದಿದೆ ಎಂದು ಛತ್ತರ್ಪುರ ಜಿಲ್ಲೆಯ ಮೂಲಗಳು ತಿಳಿಸಿವೆ. ಮದುವೆಯಲ್ಲಿ ಅತಿಥಿಗಳು ಊಟ ಮಾಡುತ್ತಿದ್ದಾಗ, ದೇವಮಾನವನ ಕಿರಿಯ ಸಹೋದರ ತನ್ನ ಸಹಾಯಕರೊಂದಿಗೆ ಮದುವೆಗೆ ನುಗ್ಗಿ ಗದ್ದಲವನ್ನು ಸೃಷ್ಟಿಸಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರೊಂದಿಗೆ, ಛತ್ತರ್ಪುರ ಜಿಲ್ಲಾ ಪೊಲೀಸರು ವೀಡಿಯೊದಲ್ಲಿ ವ್ಯಕ್ತಿಗಳನ್ನು ವಿಚಾರಣೆ ನಡೆಸಲು ತಂಡ ರಚಿಸಿದ್ದಾರೆ.
ತನಿಖೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಛತ್ತರ್ಪುರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement