ಚಂಡೀಗಢ: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿದ ಸುಮಾರು ಆರು ತಿಂಗಳ ನಂತರ, ರಾಹುಲ್ ಗಾಂಧಿ ಅವರು ಯೋಜನೆಯ ಬಗ್ಗೆ ಟೀಕೆ ಮುಂದುವರಿಸಿದ್ದಾರೆ. ಇದಕ್ಕೆ ಬಿಜೆಪಿ ಅವರನ್ನು "ಸೇನಾ ವಿರೋಧಿ" ಎಂದು ಆರೋಪಿಸಿದೆ. ತಮ್ಮ ಭವಿಷ್ಯ ಹಾಳಾಗಿದೆ ಎಂದು ಸೇನೆಯ ಯುವ ಅಭ್ಯರ್ಥಿಗಳು ತಮ್ಮ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಹರಿಯಾಣದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತದ ಮೊದಲ ದಿನದ ರ್ಯಾಲಿಯಲ್ಲಿ ನಿನ್ನೆ ಅವರು ಮಾತನಾಡಿದರು. ಸನೋಲಿ-ಪಾಣಿಪತ್ ರಸ್ತೆಯಿಂದ ಯಾತ್ರೆ ಪುನರಾರಂಭವಾಯಿತು. ಪಾಣಿಪತ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ "ಮೊದಲು ಅಗ್ನಿಪಥ್ ಯೋಜನೆ ಏನೆಂದು ನನಗೆ ಅರ್ಥ ಮಾಡಿಸಿ ಎಂದರು.
''ರಾಷ್ಟ್ರದ ಯುವಶಕ್ತಿಯ ಸಾಮರ್ಥ್ಯ ವ್ಯರ್ಥವಾಗುತ್ತಿದೆ. ಬಿಜೆಪಿಯವರು ತಮ್ಮ ನಾಯಕರು ದೇಶಭಕ್ತರು ಎಂದು ಹೇಳುತ್ತಾರೆ. ಅವರ ದೇಶಭಕ್ತಿ ನನಗೆ ಅರ್ಥವಾಗುವಂತೆ ಮಾಡಿ. ನಾನು ಅಗ್ನಿವೀರ್ ವಿಷಯವನ್ನು ಪ್ರಸ್ತಾಪಿಸಿದಾಗ, ನಾನು ರಕ್ಷಣಾ ಪಡೆಗಳ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಬಿಜೆಪಿ ಹೇಳುತ್ತದೆ, ದೇಶದ ರಕ್ಷಣಾ ಪಡೆಗಳ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ.
“ತಮಗೆ ಅಗ್ನಿವೀರ್ ಇಷ್ಟವಿಲ್ಲ ಎಂದು ಯುವಕರು ಹೇಳಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ರೆ ಮುಂದೆ ಅವರಿಗೆ ಯಾವುದೇ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಸರ್ಕಾರ ಪ್ರತಿಕ್ರಿಯಿಸಿತು. ಹೊರಗೆ ಬರದಂತೆ ಬೆದರಿಕೆ ಹಾಕಿತು. ನಾನು 3,000 ಕಿಮೀ ನಡೆದಿದ್ದೇನೆ ಈ ಮಧ್ಯೆ ಹಲವು ಯುವಕರು ಭೇಟಿಯಾಗಿದ್ದೇನೆ. ಅವರು ತಮ್ಮ ಭವಿಷ್ಯವನ್ನು ಹಾಳುಮಾಡಿದ್ದಾರೆ ಎಂದು ನನಗೆ ಹೇಳುತ್ತಿದ್ದಾರೆ ಎಂದರು.
ಕೇವಲ ಶೇಕಡಾ 25ರಷ್ಟು ಮಂದಿ ಹೊಸ ನೇಮಕಾತಿಗಳನ್ನು ಮಾಡಿದ ನಾಲ್ಕು ವರ್ಷಗಳ ನಂತರ ನಿಯಮಿತ ಉದ್ಯೋಗಗಳನ್ನು ಪಡೆಯುತ್ತಾರೆ. ಉಳಿದವರು ನಿರುದ್ಯೋಗಿಗಳಾಗಿ ಉಳಿಯುತ್ತಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ CMIE ನಿರುದ್ಯೋಗ ದತ್ತಾಂಶ ಹೇಳುತ್ತದೆ. ಹರಿಯಾಣ ರಾಜ್ಯವು ಅಗ್ರಸ್ಥಾನದಲ್ಲಿರುವುದರಿಂದ ರಾಜ್ಯದ ಹೆಚ್ಚಿನ ನಿರುದ್ಯೋಗ ದರದ ಬಗ್ಗೆ ಅವರು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವನ್ನು ಆಪಾದಿಸಿದರು.
Advertisement