ಇಂಫಾಲ್: ಕಳೆದೊಂದು ತಿಂಗಳಿನಿಂದ ಜನಾಂಗೀಯ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಹೊರ ಶಕ್ತಿಗಳ ಕೈವಾಡವನ್ನು ಅಲ್ಲಗಳೆಯುವಂತಿಲ್ಲ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಶನಿವಾರ ಹೇಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜಕೀಯ ಕೈವಾಡವಿದೆ. ಬಿಜೆಪಿ ಕಚೇರಿ ಮೇಲಿನ ದಾಳಿ ಯತ್ನ ಸಾರ್ವಜನಿಕರಿಂದ ಆಗಿಲ್ಲ, ರಾಜಕೀಯವಾಗಿ ನಡೆದಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುವವರನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ. ಮನುಷ್ಯರ ಬದುಕನ್ನು ಇಟ್ಟುಕೊಂಡು ರಾಜಕೀಯ ಮಾಡಬಾರದು ಎಂದರು.
ಇದನ್ನೂ ಓದಿ: ಮಣಿಪುರದಲ್ಲಿ ಜುಲೈ 8 ರವರೆಗೂ ಶಾಲೆಗಳು ಬಂದ್
ಶಾಂತಿಯನ್ನು ಮರುಸ್ಥಾಪಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಕುಕಿ ಸಹೋದರರು ಮತ್ತು ಸಹೋದರಿಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಎಲ್ಲವನ್ನೂ ಕ್ಷಮಿಸಿ ಮರೆತುಬಿಡೋಣ; ಎಂದಿನಂತೆ ಸಮನ್ವತೆಯೊಂದಿಗೆ ಒಟ್ಟಿಗೆ ಬದುಕೋಣ ಎಂದು ಕೇಳಿಕೊಂಡಿದ್ದೇನೆ. ಮಣಿಪುರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವವರ ತಪಾಸಣೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಅವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಪರಿಸ್ಥಿತಿ ಮರಳಿ ತರುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ರಾಜ್ಯದ ಜನರಿಗೆ ವೈಯಕ್ತಿಕ ಸಂದೇಶ ನೀಡಿದ ಸಿಎಂ ಬಿರೇನ್ ಸಿಂಗ್, ನಾವೆಲ್ಲರೂ ಒಂದೇ. ಮಣಿಪುರ ಸಣ್ಣ ರಾಜ್ಯ ಆದರೆ, ನಮ್ಮಲ್ಲಿ ಬುಡಕಟ್ಟುಗಳಿವೆ. ಈ ಎಲ್ಲಾರು ಒಟ್ಟಾಗಿ ಬದುಕಬೇಕಾಗಿದೆ. ಹೊರಗಿನಿಂದ ಹೆಚ್ಚು ಜನರು ಬಂದು ಇಲ್ಲಿ ನೆಲೆಸದಂತೆ ಎಚ್ಚರ ವಹಿಸಬೇಕು. ರಾಜ್ಯ ಒಡೆಯಲು ಅಥವಾ ಪ್ರತ್ಯೇಕ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಎಲ್ಲರನ್ನೂ ಒಂದಾಗಿ ಇಡಲು ತ್ಯಾಗ ಮಾಡುತ್ತೇನೆ ಮತ್ತು ರಾಜ್ಯದ ಜನರ ಕಾರಣದಿಂದಾಗಿ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
Advertisement