ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಹೊಸ ವಿದ್ಯಮಾನಗಳು ನಡೆಯುವುದರೊಂದಿಗೆ ತೀವ್ರ ಕುತೂಹಲ ಮೂಡಿಸುತ್ತಿದೆ. ದಿಢೀರ್ ಬೆಳವಣಿಯಲ್ಲಿ ಅಜಿತ್ ಪವಾರ್ ಎನ್ ಸಿಪಿ ಒಡೆದಂತೆ ಈಗ ಕಾಂಗ್ರೆಸ್ ಪಕ್ಷದಲ್ಲೂ ಒಡಕಿನ ಮಾತುಗಳು ಕೇಳಿಬರುತ್ತಿವೆ. ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಬಿಜೆಪಿ ಸೇರಲಿದ್ದಾರೆ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.
ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ವಿಪಕ್ಷ ನಾಯಕ ಮತ್ತು ಪ್ರಸ್ತುತದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಇಂದು ನಡೆದ ರಾಜ್ಯ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಿಂದಲೂ ಅಶೋಕ್ ಚವಾಣ್ ದೂರ ಉಳಿದರು ಎನ್ನಲಾಗಿತ್ತು. ಆದರೆ, ಇದೆಲ್ಲಾ ಕೇವಲ ವದಂತಿ. ನನ್ನ ಬಗೆ ಯಾರೂ ಈ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದೆ. ಆದರೆ, ಪೂರ್ವ ನಿರ್ಧರಿತ ಸಭೆಯ ಕಾರಣದಿಂದ ಸಭೆಯಿಂದ ಬೇಗ ನಿರ್ಗಮಿಸಿದ್ದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಹಲವು ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ಬಯಸುತ್ತಿದ್ದಾರೆ ಎಂದು ಶಿವಸೇನೆ-ಶಿಂಧೆ ಬಣದ ಶಾಸಕ ಸಂಜಯ್ ಶಿರ್ಸಾತ್ ಹೇಳಿದ್ದಾರೆ. 16 ರಿಂದ 17 ಕಾಂಗ್ರೆಸ್ ಶಾಸಕರು ಹೊರಹೋಗಲು ಬಯಸಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಕೂಡ ವಿಭಜನೆಯಾಗಲಿದೆ ಎಂದು ಅವರು ಹೇಳಿದರು,
ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಯಾವುದೇ ಯೋಜನೆ ಹೊಂದಿಲ್ಲ ಮತ್ತು ಆರ್ ಎಸ್ ಎಸ್ ಬಂಡಾಯ ನಾಯಕ ಅಜಿತ್ ಪವಾರ್ ಮತ್ತು ಅವರ ಬೆಂಬಲಿಗರು ಸರ್ಕಾರಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಶಿವಸೇನೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಪಕ್ಷ ಗುರುವಾರ ತಿಳಿಸಿದೆ.
Advertisement