ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ವರುಣನ ಆರ್ಭಟದ ನಡುವೆಯೂ ಜೋಡಿಯೊಂದು ಆನ್ ಲೈನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ರಸ್ತೆ ಬಂದ್ ಮತ್ತಿತರ ಪ್ರತಿಕೂಲ ಹವಾಮಾನದಿಂದಾಗಿ ಶಿಮ್ಲಾದ ಕೊಟ್ ಘರ್ ನಿಂದ ವಿವಾಹ ಮಹೋತ್ಸವ ನಿಗದಿಯಾಗಿದ್ದ ಕುಲುವಿನ ಭುಂತರ್ ಗೆ ದಿಬ್ಬಣದಲ್ಲಿ ತೆರಳಲು ಸಾಧ್ಯವಾಗದೆ ಆಶಿಶ್ ಸಿಂಘಾ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿವಾನಿ ಠಾಕೂರ್ ಅವರನ್ನು ವಿವಾಹವಾಗಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಶನಿವಾರದಿಂದ ಸತತ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹ ಮತ್ತು ಭೂಕುಸಿತ ಮತ್ತಿತರ ಮಳೆ ಸಂಬಂಧಿತ ಘಟನೆಗಳಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ.
ಆಶಿಶ್ ಸಿಂಘಾ ಸೋಮವಾರ ಮದುವೆ ದಿಬ್ಬಣದೊಂದಿಗೆ ಭುಂತರ್ ತಲುಪಬೇಕಿತ್ತು. ಕುಲು ಜಿಲ್ಲೆಯಲ್ಲೂ ಇತ್ತೀಚಿಗೆ ವಿಪತ್ತು ಸಂಭವಿಸಿತ್ತು. ಆದ್ದರಿಂದ ಕುಟುಂಬ ಸದಸ್ಯರು ಮದುವೆಯನ್ನು ಆನ್ಲೈನ್ನಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎಂದು ಥಿಯೋಗ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಕೇಶ್ ಸಿಂಘಾ ಮಂಗಳವಾರ ಪಿಟಿಐಗೆ ತಿಳಿಸಿದರು.
ಜನರು ಪ್ರಯಾಣವನ್ನು ತಪ್ಪಿಸುವಂತೆ ಸರ್ಕಾರ ಸಲಹೆ ನೀಡಿದೆ ಮತ್ತು ಅದರಂತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಾಹ ಮಹೋತ್ಸವ ನಡೆದಿದೆ.
Advertisement