ನವದೆಹಲಿ: ದೆಹಲಿಯಲ್ಲಿ ನಿನ್ನೆ ಮಂಗಳವಾರ ನಡೆದ ಎನ್ ಡಿಎ ಮೈತ್ರಿಕೂಟಗಳ ಸಭೆಯಲ್ಲಿ ಅಪರೂಪದ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್ ಪಾಸ್ವಾನ್)ದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi)ಆತ್ಮೀಯವಾಗಿ ಪ್ರೀತಿಯಿಂದ ಆಲಂಗಿಸಿಕೊಂಡರು.
ಎನ್ ಡಿಎ ಸಭೆ ಮುಗಿದ ಕೂಡಲೇ ಟ್ವೀಟ್ ಮಾಡಿ ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಹೇಳಿದ ಚಿರಾಗ್ ಪಾಸ್ವಾನ್, ನನ್ನನ್ನು ಆಲಂಗಿಸಿಕೊಂಡು ಪ್ರೀತಿ ಗೌರವ ತೋರಿಸಿದ್ದಕ್ಕೆ ನಿಮಗೆ ಹೃದಯಾಂತರಾಳದಿಂದ ಧನ್ಯವಾದಗಳು ಗೌರವಾನ್ವಿತ ಪ್ರಧಾನ ಮಂತ್ರಿಗಳೇ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಎನ್ ಡಿಎ ಸಭೆಯ ಬಗ್ಗೆ ಮಾತನಾಡಿರುವ ಚಿರಾಗ್ ಪಾಸ್ವಾನ್(Chirag Paswan), ಇಂದಿನ ಎನ್ ಡಿಎ ಸಭೆಯಲ್ಲಿ ಎಲ್ಲಾ ನಾಯಕರು ಉತ್ಸಾಹಭರಿತವಾಗಿ ಪ್ರಧಾನಿ ಮೋದಿಯವರಿಗೆ ಬೆಂಬಲ ಸೂಚಿಸಿದ್ದಾರೆ. ನಾನು ಮತ್ತು ನನ್ನ ಪಕ್ಷ ಕೂಡ ಪ್ರಧಾನಿಯವರಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.
ತಮ್ಮ ದಿವಂಗತ ತಂದೆಯವರ ಪಕ್ಷದಿಂದ ಬಂಡಾಯವೆದ್ದು ಹೊರಬಂದ ಚಿಕ್ಕಪ್ಪ ಬಿಹಾರದ ಹಜಿಪುರದ ಲೋಕಸಭಾ ಸದಸ್ಯ ಪಶುಪತಿ ಪರಸ್ ಅವರನ್ನು ಕೇಂದ್ರ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಿದ ನಂತರ ಚಿರಾಗ್ ಪಾಸ್ವಾನ್ ಬೇಸರಗೊಂಡಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು.
ಚಿರಾಗ್ ಪಾಸ್ವಾನ್ ಆಲಂಗಿಸುವ ಮೂಲಕ ಪ್ರಧಾನಿ ಮೋದಿಯವರು ಬಿಹಾರ ಜನತೆಗೆ ಅತಿದೊಡ್ಡ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಮತ್ತು ಪಶುಪತಿ ಪರಸ್ ಇಬ್ಬರೂ ಹಜಿಪುರ್ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು ಯಾರಿಗೆ ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂಬುದು ನೋಡಬೇಕಿದೆ.
Advertisement