ಮಣಿಪುರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು: ಕಾಂಗ್ರೆಸ್ ಒತ್ತಾಯ

ಮಣಿಪುರ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಮತ್ತು ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ವಿಪಕ್ಷಗಳು ಸರ್ಕಾರದ ವಿರುದ್ಧ  ದಾಳಿಯನ್ನು ತೀವ್ರಗೊಳಿಸಿವೆ. ಅದರಲ್ಲೂ  ಈಶಾನ್ಯ ರಾಜ್ಯದ ಗ್ರಾಮವೊಂದರಲ್ಲಿ  ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿಪಕ್ಷಗಳ ಆಕ್ರೋಶ ಮತ್ತಷ್ಟು ಹೆಚ್ಚಿದೆ.

ಈ ಮಧ್ಯೆ ಮಣಿಪುರ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಮತ್ತು ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನರೇಂದ್ರಮೋದಿ ಜೀ ನಿನ್ನೆ ನೀವು ಸಂಸತ್ತಿನ ಒಳಗೆ ಹೇಳಿಕೆ ನೀಡಿಲ್ಲ, ನೀವು ಕೋಪಗೊಂಡಿದ್ದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೊಂದಿಗೆ ಸುಳ್ಳು ಹೋಲಿಕೆ ಮಾಡುವ ಬದಲು, ನಿಮ್ಮ ಮಣಿಪುರದ ಮುಖ್ಯಮಂತ್ರಿಯನ್ನು ಮೊದಲು ವಜಾ ಮಾಡಬಹುದಿತ್ತು ಎಂದಿದ್ದಾರೆ. 

ಸಂಸತ್ತಿನಲ್ಲಿ ಇಂದು  ನೀವು ವಿಸ್ತೃತವಾದ ಹೇಳಿಕೆ ನೀಡಬೇಕು ಎಂದು ಇಡೀ ದೇಶವೇ ನಿರೀಕ್ಷಿಸುತ್ತಿದೆ. ಕೇವಲ ಒಂದು ಘಟನೆಯ ಬಗ್ಗೆ ಅಲ್ಲ, ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದ್ದರೂ 80 ದಿನಗಳ ಹಿಂಸಾಚಾರದ ಬಗ್ಗೆ ಸಂಪೂರ್ಣ ಅಸಹಾಯಕ ಮತ್ತು ಪಶ್ಚಾತ್ತಾಪವಿಲ್ಲದ ವಿಸ್ತೃತವಾದ ಹೇಳಿಕೆಯನ್ನು ನೀಡಬೇಕೆಂದು ಇಡೀ ದೇಶದ ನಿರೀಕ್ಷೆಯಾಗಿರುವುದಾಗಿ ಅವರು ತಿಳಿಸಿದ್ದಾರೆ. 

ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯು 140 ಕೋಟಿ ಭಾರತೀಯರಿಗೆ ನಾಚಿಕೆಯನ್ನುಂಟು ಮಾಡಿದೆ ಎಂದು ಗುರುವಾರ ಹೇಳಿದ್ದ ಪ್ರಧಾನಿ ಮೋದಿ, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದರು.  ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿಯವರ ಹೇಳಿಕೆಗೆ ವಿರೋಧಪಕ್ಷಗಳು ಪಟ್ಟುಬಿಡದ ಕಾರಣ ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com