ಲಕ್ನೋ: ಬೇರೆ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ತಂಗಿಯ ಶಿರಚ್ಛೇದ ಮಾಡಿ ಸಹೋದರನೊಬ್ಬ ಪೊಲೀಸ್ ಠಾಣೆಗೆ ತಂದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ನಡೆದಿದೆ.
24 ವರ್ಷದ ರಿಯಾಜ್ ಎಂಬ ವ್ಯಕ್ತಿ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಆಕೆ ತನ್ನ ಗ್ರಾಮದ ಅದೇ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ಸಂಬಂಧ ಯುವತಿಯ ತಂದೆ ದೂರು ದಾಖಲಿಸಿದ್ದರು. ತಂಗಿಯ ಪ್ರೇಮದ ಬಗ್ಗೆ ಕೋಪಗೊಂಡ ರಿಯಾಜ್ ಆಕೆಯ ಶಿರಚ್ಛೇದ ಮಾಡಿದ್ದಾನೆ. ಪೊಲೀಸರು ಗ್ರಾಮವನ್ನು ತಲುಪಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ-ಉತ್ತರ) ಅಶುತೋಷ್ ಮಿಶ್ರಾ ತಿಳಿಸಿದ್ದಾರೆ.
ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ವಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಿಯಾಜ್ ಎಂದು ಗುರುತಿಸಲಾದ ಆರೋಪಿಯು ತನ್ನ ಸಹೋದರಿ ಆಶಿಫಾಳ ಶಿರಚ್ಛೇದ ಮಾಡಿದ್ದಾನೆ. ಗ್ರಾಮದ ಚಾಂದ್ ಬಾಬು ಎಂಬಾತನ ಜೊತೆ ಆಶಿಫಾಗೆ ಇದ್ದ ಪ್ರೇಮ ಸಂಬಂಧವೇ ವಾದಕ್ಕೆ ಕಾರಣ. ಹಲವು ದಿನಗಳ ಹಿಂದೆ, ಚಾಂದ್ ಬಾಬು ಆಶಿಫಾಳನ್ನು ಕರೆದುಕೊಂಡು ಹೋಗಿದ್ದರು. ಆಕೆಯ ಕುಟುಂಬವು ಪೋಲಿಸ್ ದೂರು ದಾಖಲಿಸಿತ್ತು.
ಆಶಿಫಾಳ ಸಹೋದರ ರಿಯಾಜ್ಗೆ ತನ್ನ ಸಹೋದರಿ ಚಾಂದ್ ಬಾಬು ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ತೀವ್ರ ಸಿಟ್ಟಿತ್ತು. ಈ ಪ್ರೇಮ ಸಂಬಂಧದಿಂದ ಇವರಿಬ್ಬರ ನಡುವೆ ಜಗಳವಾಗಿತ್ತು. ಶುಕ್ರವಾರ ಮಧ್ಯಾಹ್ನ ಅಣ್ಣ ಮತ್ತು ತಂಗಿ ನಡುವೆ ವಾಗ್ವಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧದಿಂದ ತಂಗಿಯ ತಲೆ ಕಡಿದಿದ್ದಾನೆ. ಕೃತ್ಯವೆಸಗಿದ ನಂತರ ಸಹೋದರಿಯ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದು ಮನೆಯಿಂದ ಹೊರಗೆ ಹೋಗಿದ್ದಾನೆ.
ರುಂಡ ಸಮೇತ ರಿಯಾಜ್ ಮನೆಯಿಂದ ಹೊರಗೆ ಹೋಗಿದ್ದನ್ನು ಕಂಡು ನೆರೆಹೊರೆಯವರು ಕಂಗಾಲಾಗಿ ಹೋಗಿದ್ದರು. ತಕ್ಷಣವೇ ಪೊಲೀಸರಿಗೆ ಈ ಮಾಹಿತಿ ನೀಡಿದ್ದು, ತಂಗಿಯ ರುಂಡವನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಿಯಾಜ್ನನ್ನು ಮಾರ್ಗಮಧ್ಯದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.
Advertisement