ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜ್ಯಪಾಲ ಆರ್ ಎನ್ ರವಿ ಅವರನ್ನು ಭೇಟಿ ಮಾಡಿದ್ದು, ಡಿಎಂಕೆ ವಿರುದ್ಧ ಹಗರಣದ ಆರೋಪ ಮಾಡಿದ್ದಾರೆ.
ಡಿಎಂಕೆ ಸಚಿವರು, ಶಾಸಕರು ಹಾಗೂ ಸಂಸದರ ವಿರುದ್ಧ ಬೇನಾಮಿ ನಂಟು ಆರೋಪ ಮಾಡಿರುವ ತಮಿಳುನಾಡು ಬಿಜೆಪಿ ಘಟಕ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದೆ.
ಇದಷ್ಟೇ ಅಲ್ಲದೇ 5,600 ಕೋಟಿ ರೂಪಾಯಿ ಮೌಲ್ಯದ ಹಗರಣವೂ ನಡೆದಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ಇದನ್ನು ಡಿಎಂಕೆ ಫೈಲ್ಸ್ ನ 2 ನೇ ಭಾಗ ಎಂದು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾರ್ಪೊರೇಷನ್ ನಲ್ಲಿ 600 ಕೋಟಿ, ಸಾರಿಗೆ ಇಲಾಖೆಯಲ್ಲಿ 2,000 ಕೋಟಿ, ಡಿಎಂಕೆ ಆಡಳಿತಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ 3,000 ಕೋಟಿ ರೂಪಾಯಿ ಹಗರಣ ನಡೆದಿದೆ ಇವೆಲ್ಲವನ್ನೂ ಸೇರಿಸಿದರೆ 5,600 ಕೋಟಿ ರೂಪಾಯಿ ಹಗರಣವಾಗುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಹಗರಣ ನಡೆದಿದೆ ಎಂಬುದಕ್ಕೆ ಪೂರಕವಾದ ಅಂಶಗಳಿಗೆ ಸಾಕ್ಷ್ಯ ಒದಗಿಸಲು ಅಣ್ಣಾಮಲೈ 16 ನಿಮಿಷಗಳ ವೀಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದು, ಡಿಎಂಕೆ ಫೈಲ್ಸ್ ಮೊದಲ ಭಾಗದ ಮುಂದುವರೆದ ಭಾಗ ಇದಾಗಿದ್ದು, ಇದು ಡಿಎಂಕೆ ಫೈಲ್ಸ್ ಭಾಗ-2 ಎಂದು ಟ್ವೀಟ್ ಮಾಡಿದ್ದಾರೆ.
2024 ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹಾಗೂ ಪಕ್ಷ ಸಂಘಟನೆಗಾಗಿ, ಡಿಎಂಕೆ ಪಕ್ಷದ ವಿರುದ್ಧ ಜು.28 ರಿಂದ ಅಣ್ಣಾಮಲೈ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
Advertisement