ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ವಿದೇಶದಲ್ಲಿ ಆಶ್ರಯ ಪಡೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರ “ಕ್ವಿಟ್ ಇಂಡಿಯಾ” ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಅವರು, "ಮೋದಿ ಅವರು ಅಧಿಕಾರ ತ್ಯಜಿಸುವ ಬಗ್ಗೆ ಯೋಚಿಸುತ್ತಿದ್ದಾರೆ... ಅವರು ಹಲವಾರು ದೇಶಗಳಿಗೆ ಭೇಟಿ ನೀಡಲು ಇದೇ ಕಾರಣ. ಅವರು ವಿದೇಶಗಳಲ್ಲಿ ತಮಗೆ ಇಷ್ಟವಾಗುವ ಪಿಜ್ಜಾ, ಮೊಮೊಸ್ ಮತ್ತು ಚೌ ಮೇನ್ ಅನ್ನು ಆನಂದಿಸಲು ಕೂಲ್ ಆಗಿರುವ ಜಾಗ ಹುಡುಕುತ್ತಿದ್ದಾರೆ ” ಎಂದು ತಿರುಗೇಟು ನೀಡಿದರು.
ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ “INDIA” ಸಭೆಯನ್ನು ತಾವು ಎದುರು ನೋಡುತ್ತಿರುವುದಾಗಿ ತಿಳಿಸಿದ ಲಾಲು, “ನಾವು ಒಗ್ಗಟ್ಟನ್ನು ಉಳಿಸಿಕೊಳ್ಳಬೇಕು ಮತ್ತು ಬಿಜೆಪಿಯನ್ನು ಸೋಲಿಸಬೇಕು ಎಂದರು.
ನರೇಂದ್ರ ಮೋದಿಯವರು ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾವು ಅವರ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಲಾಲು ಪ್ರಸಾದ್ ಹೇಳಿದ್ದಾರೆ.
Advertisement