ಹುಡುಗಿ ಜತೆ ಫ್ರೆಂಡ್ ಶಿಪ್ ವಿಚಾರಕ್ಕೆ ಜಗಳ; ಕ್ಲಾಸ್ ಮೆಟ್ ನನ್ನೇ ಕೊಂದ 10ನೇ ತರಗತಿ ವಿದ್ಯಾರ್ಥಿ

ಉತ್ತರ ಪ್ರದೇಶದ ಕಾನ್ಪುರದ ಶಾಲೆಯೊಂದರಲ್ಲಿ ಹುಡುಗಿ ಜತೆ ಫ್ರೆಂಡ್ ಶಿಪ್ ವಿಚಾರಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ ಮೆಟ್ ನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ ಕಾನ್ಪುರದ ಶಾಲೆಯೊಂದರಲ್ಲಿ ಹುಡುಗಿ ಜತೆ ಫ್ರೆಂಡ್ ಶಿಪ್ ವಿಚಾರಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ ಮೆಟ್ ನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿಯು, ವಿದ್ಯಾರ್ಥಿನಿಯೊಂದಿಗೆ ಸ್ನೇಹ ಹೊಂದಿದ್ದಕ್ಕಾಗಿ ತನ್ನ ಸಹಪಾಠಿಯನ್ನು ಹಲವು ಬಾರಿ ಇರಿದ ಕೊಂದಿದ್ದು, ಆರೋಪಿ ರಾಜ್‌ವೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಪಿ ಘಟಂಪುರ ದಿನೇಶ್ ಶುಕ್ಲಾ ಅವರು ತಿಳಿಸಿದ್ದಾರೆ.

ಇಲ್ಲಿನ ಬಿದ್ನು ಪ್ರದೇಶದ ಗೋಪಾಲಪುರಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಊಟದ ವಿರಾಮದ ವೇಳೆ ಈ ಘಟನೆ ನಡೆದಿದೆ.

ಮೃತ 10ನೇ ತರಗತಿಯ ವಿದ್ಯಾರ್ಥಿ ನೀಲೇಂದ್ರ ತಿವಾರಿ ಮತ್ತು ಆರೋಪಿ ರಾಜ್‌ವೀರ್ ಇಬ್ಬರೂ ಸ್ನೇಹಿತರಾಗಿದ್ದು, ಕಳೆದ ವರ್ಷದ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು ಎಂದು ಶಾಲೆಯ ಮೂಲಗಳು ಹೇಳಿವೆ. 

ನಾಲ್ಕು ದಿನಗಳ ಹಿಂದೆ ಯಾವುದೋ ವಿಷಯಕ್ಕೆ ಇಬ್ಬರೂ ವಿದ್ಯಾರ್ಥಿಗಳ ನಡುವೆ ಜಗಳವಾಗಿದೆ.  ಸೋಮವಾರ ಬೆಳಗ್ಗೆ 10:45 ರ ಸುಮಾರಿಗೆ ಶಾಲೆಯಲ್ಲಿ ಅವರು ಮತ್ತೆ ಮುಖಾಮುಖಿಯಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಹೆಚ್ಚುವರಿ ಸಿಪಿ ಅಂಕಿತ್ ಶರ್ಮಾ ಅವರು ತಿಳಿಸಿದ್ದಾರೆ.

ಆದಾಗ್ಯೂ, ಅದೇ ತರಗತಿಯ ವಿದ್ಯಾರ್ಥಿಗಳ ಪ್ರಕಾರ, ನೀಲೇಂದ್ರ ವಿದ್ಯಾರ್ಥಿನಿಯೊಂದಿಗೆ ಹೆಚ್ಚು ಕ್ಲೋಸ್ ಆಗಿದ್ದೆ ಇಬ್ಬರ ನಡುವಿನ ಜಗಳಕ್ಕೆ ಕಾರಣ ಎಂದು ನಂಬಲಾಗಿದೆ. ನೀಲೇಂದ್ರನಿಗೆ ಪಾಠ ಕಲಿಸಲು ರಾಜ್‌ವೀರ್ ಬ್ಯಾಗ್‌ನಲ್ಲಿ ಚಾಕು ಬಚ್ಚಿಟ್ಟುಕೊಂಡು ಈ ಕೃತ್ಯ ಎಸಗಿದ್ದಾನೆ.

ವಿರಾಮದ ವೇಳೆ ನೀಲೇಂದ್ರ ಮತ್ತು ರಾಜವೀರ್ ನಡುವೆ ಜಗಳವಾಗಿದ್ದು, ಈ ವೇಳೆ ರಾಜವೀರ್ ಏಕಾಏಕಿ ಚಾಕು ತೆಗೆದು ನೀಲೇಂದ್ರನ ಹೊಟ್ಟೆ ಮತ್ತು ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾನೆ. ಪರಿಣಾಮವಾಗಿ, ನೀಲೇಂದ್ರ ತಿವಾರಿ ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಬಿದಿದ್ದಾರೆ. ಇತರ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ತಿಳಿಸಿದ್ದಾರೆ. 

ರಕ್ತದ ಮಡುವಿನಲ್ಲಿ ಬಿದ್ದಿದ್ದ ನೀಲೇಂದ್ರನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀಲೇಂದ್ರ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com