ಜೂನ್ 20 ಅನ್ನು ವಿಶ್ವ ದ್ರೋಹಿಗಳ ದಿನ ಎಂದು ಘೋಷಿಸಿ: ವಿಶ್ವಸಂಸ್ಥೆಗೆ ರಾವತ್ ಪತ್ರ
ಮುಂಬೈ: ಜೂನ್ 20 ಅನ್ನು ವಿಶ್ವ ದ್ರೋಹಿಗಳ ದಿನ ಎಂದು ಘೋಷಿಸುವಂತೆ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಜೂನ್ 20ರಂದು ಶಿವಸೇನೆಯ 40 ಶಾಸಕರು ಶಿವಸೇನೆ ವಿಭಜಿಸಲು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದರು. ಶಿವಸೇನೆ ಈಗ ಎರಡು ಬಣಗಳಾಗಿದೆ.
'ಜೂನ್ 20ನ್ನು ವಿಶ್ವ ದ್ರೋಹಿಗಳ ದಿನವನ್ನಾಗಿ ಆಚರಿಸುವಂತೆ ಮನವಿಯೊಂದಿಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಸರ್, ನಾನು ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಪಕ್ಷವನ್ನು ಪ್ರತಿನಿಧಿಸುತ್ತೇನೆ ಮತ್ತು ಭಾರತದ ಮೇಲ್ಮನೆ ಸಂಸದನಾಗಿದ್ದೇನೆ. ನನ್ನ ಪಕ್ಷ ಶಿವಸೇನೆ(UBT) ಪಶ್ಚಿಮ ಭಾರತದ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದ ಪಕ್ಷವಾಗಿದೆ. ಇದನ್ನು 1966 ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಪ್ರಾರಂಭಿಸಿದರು, ಅವರು ಮುಂಬೈನಲ್ಲಿ ಸ್ಥಳೀಯ ಯುವಕರಿಗಾಗಿ ಹೋರಾಡಿದರು' ಎಂದು ರಾವತ್ ಅವರು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರಿಗೆ ಪತ್ರ ಬರೆದಿದ್ದು, ಅದನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ಪಕ್ಷವನ್ನು ಈಗ ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದಾರೆ ಮತ್ತು ಅವರು ನವೆಂಬರ್ 28, 2019 ರಿಂದ ಜೂನ್ 29, 2022 ರವರೆಗೆ ಮಹಾರಾಷ್ಟ್ರದ ಸಿಎಂ ಆಗಿದ್ದರು' ಎಂದು ರಾವತ್ ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಠಾಕ್ರೆ ವಿರುದ್ಧ ಬಂಡಾಯವೆದ್ದು, ಜೂನ್ 20 ರಂದು ಮುಂಬೈ ತೊರೆದು ಗುಜರಾತ್ಗೆ ತೆರಳಿದ್ದರು. ನಂತರ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ಪತನವಾದ ಬಳಿಕ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದರು.