ಗುವಾಹಟಿ: ಭಾರತದಲ್ಲಿಯೂ ಹಲವು ಮಂದಿ ಹುಸೇನ್ ಒಬಾಮಗಳಿದ್ದಾರೆ, ಅವರೊಂದಿಗೆ ವ್ಯವಹರಿಸುವುದು ತಮ್ಮ ಆದ್ಯತೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಭಾರತದಲ್ಲಿನ ಅಲ್ಪಸಂಖ್ಯಾತರು ದುರ್ಬಲರಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಅಸ್ಸಾಂ ಪೊಲೀಸರು ಬಂಧಿಸುತ್ತಾರೆಯೇ? ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ ಶರ್ಮಾ, ಭಾರತದಲ್ಲಿಯೂ ಹಲವು ಮಂದಿ ಹುಸೇನ್ ಒಬಾಮಗಳಿದ್ದಾರೆ, ಅವರೊಂದಿಗೆ ವ್ಯವಹರಿಸುವುದು ಅಸ್ಸಾಂ ಪೊಲೀಸರ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ನಾವು ವಾಷಿಂಗ್ ಟನ್ ಗೆ ಹೋಗುವ ಮುನ್ನ ಭಾರತದಲ್ಲಿರುವ ಹುಸೇನ್ ಒಬಾಮಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಅಸ್ಸಾಂ ಪೊಲೀಸರು ತಮ್ಮದೇ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಾರೆ ಎಂದು ಪತ್ರಕರ್ತರೊಬ್ಬರ ಪೋಸ್ಟ್ ನ್ನು ಹಂಚಿಕೊಂಡಿರುವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಒಬಾಮ ಅವರ ವಿರುದ್ಧ ಗುವಾಹಟಿ ಪೊಲೀಸರು ಎಫ್ಐ ಆರ್ ಹಾಕಿಲ್ಲವೇ? ಅಸ್ಸಾಂ ಪೊಲೀಸರು ಒಬಾಮ ಅವರನ್ನು ಬಂಧಿಸಲು ವಾಷಿಂಗ್ ಟನ್ ಗೆ ತೆರಳಿದ್ದಾರಾ? ಎಂದು ಪ್ರಶ್ನೆ ಮಾಡಲಾಗಿತ್ತು.
Advertisement