ವಾಷಿಂಗ್ ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತ ಭವನದಲ್ಲಿ ಅಮೇರಿಕಾ ಹಾಗೂ ಭಾರತದ ಸಿಇಒ ಹಾಗೂ ಹಲವು ಸಂಸ್ಥೆಗಳ ಅಧ್ಯಕ್ಷರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸಹ ಪಾಲ್ಗೊಂಡಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ, ಗೂಗಲ್ ಸಿಇಒ ಸುಂದರ್ ಪಿಚ್ಚೈ, ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ, ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಎಂಡಿ ಮುಖೇಶ್ ಅಂಬಾನಿ, ಜೆರೋದಾ ಹಾಗೂ ಟ್ರೂ ಬೀಕನ್ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಂತ್ರಜ್ಞಾನ ಹಾಗೂ ಪ್ರತಿಭೆಯ ಸಂಯೋಜನೆ ಜಗತ್ತಿನ ಉಜ್ವಲ ಭವಿಷ್ಯಕ್ಕೆ ಖಾತ್ರಿಯಾಗಲಿದೆ ಎಂದು ಪ್ರಧಾನಿ ಮೋದಿ ಈ ಸಭೆಯಲ್ಲಿ ತಿಳಿಸಿದ್ದಾರೆ.
ಈ ಬೆಳಗಿನ ಸಭೆ ಕೇವಲ ಕೆಲವು ಸ್ನೇಹಿತರೊಂದಿಗೆ ನಡೆಯುತ್ತಿದೆ ಆದರೆ ಇದು ಉಜ್ವಲ ಭವಿಷ್ಯವನ್ನು ಹೊತ್ತು ತಂದಿದೆ ಎಂದು ಮೋದಿ ಹೇಳಿದ್ದಕ್ಕೆ ಬೈಡನ್ ತಲೆದೂಗಿದರು.
ಬಿಡೆನ್ ಅವರ ದೃಷ್ಟಿ ಮತ್ತು ಸಾಮರ್ಥ್ಯಗಳು ಮತ್ತು ಭಾರತದ ಆಕಾಂಕ್ಷೆಗಳು ಮತ್ತು ಸಾಧ್ಯತೆಗಳ ಜೊತೆ ಹೆಜ್ಜೆ ಹಾಕುವ ಅತ್ಯುತ್ತಮ ಅವಕಾಶ ಎಲ್ಲರಿಗೂ ಇದೆ ಎಂದು ಮೋದಿ ಹೇಳಿದ್ದಾರೆ.
ಈ ಕಾರ್ಯಕ್ರಮ "ಹೊನ್ಹಾರ್, ಶಾಂದಾರ್, ಧರ್ದಾರ್ (ಭರವಸೆಯ, ಭವ್ಯವಾದ, ತೀಕ್ಷ್ಣವಾದ) ಕಾರ್ಯಕ್ರಮವಾಗಿದೆ ಎಂದು ಮೋದಿ ಹೇಳಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ಅಮೇರಿಕಾ ಅಧ್ಯಕ್ಷರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.
ಭಾರತ- ಅಮೇರಿಕಾ ಪಾಲುದಾರಿಕೆಯು ಮುಂಬರುವ ಪೀಳಿಗೆಗೆ ಮುಕ್ತ, ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದು ಅಧ್ಯಕ್ಷ ಬೈಡನ್ ಹೇಳಿದರು.
"ನಮ್ಮ ಸಹಕಾರವು ಕೇವಲ ನಮ್ಮ ಜನರಿಗೆ ಮಾತ್ರವಲ್ಲದೆ, ಸ್ಪಷ್ಟವಾಗಿ ಇಡೀ ಜಗತ್ತಿಗೆ ಮುಖ್ಯವಾಗಿದೆ, ಏಕೆಂದರೆ ನಮ್ಮ ಪಾಲುದಾರಿಕೆಯು ಮುಂದಿನ ಪ್ರಗತಿ ಅಥವಾ ಮುಂದಿನ ಒಪ್ಪಂದಕ್ಕಿಂತ ದೊಡ್ಡದಾಗಿದೆ" ಎಂದು ಬೈಡನ್ ಹೇಳಿದ್ದಾರೆ.
Advertisement