5ನೇ ದಿನವೂ ವ್ಯರ್ಥವಾದ ಸಂಸತ್ತು ಕಲಾಪ: ಸೋಮವಾರಕ್ಕೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಟೀಕಾಪ್ರಹಾರ, ವಾಕ್ಸಮರ ಸದನದಲ್ಲಿ ಮುಂದುವರಿಯುತ್ತಲೇ ಇದೆ.
ಸಂಸತ್ತು
ಸಂಸತ್ತು

ನವದೆಹಲಿ: ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಟೀಕಾಪ್ರಹಾರ, ವಾಕ್ಸಮರ ಸದನದಲ್ಲಿ ಮುಂದುವರಿಯುತ್ತಲೇ ಇದೆ.

ಇಂದು ಸಂಸತ್ತಿನಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ಗದ್ದಲದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು. ಸಂಸತ್ತು ಕಲಾಪ ಪುನಾರಂಭಗೊಂಡ 5ನೇ ದಿನವೂ ಕಲಾಪದಲ್ಲಿ ಯಾವುದೇ ಫಲಪ್ರದ ಮಾತುಕತೆ, ಚರ್ಚೆಗಳು ನಡೆಯದೆ ವ್ಯರ್ಥವಾಗಿ ಮುಂದೂಡಲಾಗಿದೆ. 

ಬಿಜೆಪಿ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಲು ಸದನದಲ್ಲಿ ಸಮಯಾವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಿನ್ನೆ ಮನವಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದರು. 

ಯುಕೆ ಪ್ರವಾಸದಿಂದ ವಾಪಸಾದ ನಂತರ ಇಂದು ಸಂಸತ್ ಭವನಕ್ಕೆ ಆಗಮಿಸಿದ ರಾಹುಲ್ ಗಾಂಧಿ ಲಂಡನ್‌ನಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುತ್ತೀರಾ ಎಂದು ಕೇಳಿದಾಗ ಮುಗುಳ್ನಕ್ಕು ಸುಮ್ಮನಾಗಿದ್ದರು.

ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಕೋಲಾಹಲ ಸೃಷ್ಟಿಸಿದ್ದರಿಂದ ಇಂದು ಶುಕ್ರವಾರ ಸಂಸತ್ತು ಕಲಾಪದಲ್ಲಿ ಸದನ ಸೇರಿದ ಕೆಲವೇ ನಿಮಿಷಗಳಲ್ಲಿ ರಾಜ್ಯಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು. 

ಗೌತಮ್ ಅದಾನಿ ವಿಷಯದ ಕುರಿತು ಚರ್ಚೆ ಮತ್ತು ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದರೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (BJP) ಸದಸ್ಯರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ "ಪ್ರಜಾಪ್ರಭುತ್ವ-ಬೆದರಿಕೆ" ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. 

ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಟೀಕಾಪ್ರಹಾರ, ವಾಕ್ಸಮರ ಸದನದಲ್ಲಿ ಮುಂದುವರಿಯುತ್ತಲೇ ಇದೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಯತ್ನಿಸಿದರಾದರೂ ಅವಕಾಶ ಸಿಗದ ಕಾರಣ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಆಡಳಿತ ಪಕ್ಷದ ಸದಸ್ಯರೂ ಪ್ರತಿಭಟನೆಗೆ ನಿಂತರು.

ಖರ್ಗೆ ಅವರು ಪ್ರಸ್ತಾಪಿಸಿದ ಆದೇಶವನ್ನು ಕೈಗೆತ್ತಿಕೊಂಡ ಸಭಾಪತಿಗಳು, ಮಾರ್ಚ್ 13 ಮತ್ತು 14 ರಂದು ಅವರು ಮಾಡಿದ ಪ್ರತಿಪಾದನೆಗಳನ್ನು ದೃಢೀಕರಿಸುವಂತೆ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಸೂಚಿಸಿದರು.

"ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ ಆದೇಶಕ್ಕೆ ಸಂಬಂಧಿಸಿದಂತೆ, ದಿನದ ಅವಧಿಯಲ್ಲಿ ಈ ವಿಷಯದ ಕುರಿತು ಮಾರ್ಚ್ 13 ಮತ್ತು 14 ರಂದು ಅವರು ಮಾಡಿದ ಸಮರ್ಥನೆಗಳನ್ನು ದೃಢೀಕರಿಸಲು ಸದನದ ನಾಯಕನಿಗೆ ನಿರ್ದೇಶಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ" ಎಂದು ಸಭಾಪತಿ ಧನ್ ಕರ್ ಹೇಳಿದರು. 

ಸದನದಲ್ಲಿ ಗದ್ದಲ-ಕೋಲಾಹಲ ನಡೆದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಸಭಾಪತಿ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಮೊನ್ನೆ ಸೋಮವಾರದಂದು ಬಜೆಟ್ ಅಧಿವೇಶನದ ಎರಡನೇ ಭಾಗವು ಪ್ರಾರಂಭವಾದಾಗಿನಿಂದ ಸಂಸತ್ತಿನ ಮೇಲ್ಮನೆಯಲ್ಲಿ ಯಾವುದೇ ವ್ಯವಹಾರವನ್ನು ನಡೆಸಲಿಲ್ಲ.

ಅದಾನಿ ಗ್ರೂಪ್ ವಿರುದ್ಧ ಕಾರ್ಪೊರೇಟ್ ವಂಚನೆ, ಷೇರು ಮಾರುಕಟ್ಟೆ ದುರ್ಬಳಕೆ ಮತ್ತು ಹಣಕಾಸು ದುರುಪಯೋಗದ ಆರೋಪದ ಮೇಲೆ ಜೆಪಿಸಿ ರಚಿಸದ ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ಸಂಸದರಾದ ನೀರಜ್ ಡಾಂಗಿ, ಅಖಿಲೇಶ್ ಪ್ರಸಾದ್ ಸಿಂಗ್, ಕುಮಾರ್ ಕೇತ್ಕರ್, ಸೈಯದ್ ನಸೀರ್ ಹುಸೇನ್, ಅಮೀ ಯಾಜ್ನಿಕ್ ಮತ್ತು ಸಂತೋಷ್ ಕುಮಾರ್ ಪಿ ಅವರು ನೋಟಿಸ್ ನೀಡಿದ್ದರು.

ರಂಜೀತ್ ರಂಜನ್, ಕೆಸಿ ವೇಣುಗೋಪಾಲ್, ಸಂಜಯ್ ಸಿಂಗ್ ಮತ್ತು ಪ್ರಮೋದ್ ತಿವಾರಿ ಅವರು ಅದಾನಿ ಗ್ರೂಪ್‌ನ ವ್ಯಾಪಾರ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಸರ್ಕಾರದ "ಪ್ರಶ್ನಾರ್ಹ" ಪಾತ್ರದ ಬಗ್ಗೆ ಚರ್ಚಿಸಲು ನೋಟಿಸ್‌ಗಳನ್ನು ನೀಡಿದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಗಳಲ್ಲಿನ ಸರ್ಕಾರಿ ಠೇವಣಿಗಳನ್ನು ಅಪಾಯಕ್ಕೆ ಸಿಲುಕಿಸಿದ ಅದಾನಿ ಗ್ರೂಪ್‌ನ ಹಿಂಡೆನ್‌ಬರ್ಗ್ ವರದಿಯನ್ನು ಚರ್ಚಿಸಲು ಎಲಮರಮ್ ಕರೀಂ ಬೇಡಿಕೆಯನ್ನು ಎತ್ತಿದ್ದಾರೆ ಎಂದು ಧನ್‌ಖರ್ ಹೇಳಿದರು.

ನಿಗದಿತ ಸಮಯ ಮೀರಿ ಜೇಬಿ ಮಾಥರ್ ಅವರಿಂದ ನೋಟಿಸ್ ಕೂಡ ಬಂದಿದ್ದು, ಅದನ್ನು ಪರಿಗಣಿಸಿಲ್ಲ ಎಂದು ಸಭಾಪತಿ ತಿಳಿಸಿದರು.

ರಾಜ್ಯಸಭೆಯ ದಿನದ ಕಲಾಪ ನಂತರ, ಸಭಾಪತಿಗಳು ಸಂಸದ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು, ಅವರು ಜುಲೈ 2022 ರಿಂದ ಕನ್ನಡ ನಟ ಮತ್ತು ಸದನದ ಸದಸ್ಯರಾಗಿದ್ದಾರೆ ಮತ್ತು ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು ಎಂದು ಹೇಳಿದರು. 

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಹೇಳಿಕೆಯನ್ನು ನೀಡುತ್ತಾ, ಮಾರ್ಚ್ 20 ರಿಂದ ಪ್ರಾರಂಭವಾಗುವ ವಾರದ ಸದನದ ವ್ಯವಹಾರಗಳನ್ನು ಪಟ್ಟಿ ಮಾಡಿದರು. ಸರ್ಕಾರಿ ವ್ಯವಹಾರಗಳ ಪ್ರಕಾರ, ಸದನವು ಕೌಶಲ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಕಾರ್ಯನಿರ್ವಹಣೆ, ಸಹಕಾರ, ಜವಳಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಮತ್ತು ರೈಲ್ವೆ ಕುರಿತು ಚರ್ಚೆ ನಡೆಸಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com