ಜಮ್ಮು-ಕಾಶ್ಮೀರ: ಸೇತುವೆ ಮೇಲಿಂದ ಕಂದರಕ್ಕೆ ಬಿದ್ದ ಬಸ್, 10 ಪ್ರಯಾಣಿಕರು ದುರ್ಮರಣ
ಜಮ್ಮು: ಸೇತುವೆ ಮೇಲಿಂದ ಆಳವಾದ ಕಂದರಕ್ಕೆ ಖಾಸಗಿ ಬಸ್ ಬಿದ್ದ ಪರಿಣಾಮ 10 ಪ್ರಯಾಣಿಕರು ದುರ್ಮರಣ ಹೊಂದಿರುವ ಘಟನೆ ಕೇಂದ್ರಾಡಳಿತ ಪ್ರದೇಶ ಜಮ್ಮುವಿನ ಬಳಿ ಇಂದು ಮುಂಜಾನೆ ನಡೆದಿದೆ.
ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್ ಆಳವಾದ ಕಂದರಕ್ಕೆ ಬಿದ್ದು, ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಮ್ಮು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಸ್ ಅಮೃತಸರದಿಂದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಕತ್ರಾದಿಂದ ಸುಮಾರು 15 ಕಿಮೀ ದೂರದಲ್ಲಿರುವ ಜಜ್ಜರ್ ಕೋಟ್ಲಿ ಬಳಿ ಆಳವಾದ ಕಂದರಕ್ಕೆ ಬಸ್ ಉರುಳಿ ಬಿದ್ದಿರುವುದಾಗಿ ಜಮ್ಮು ಡೆಪ್ಯುಟಿ ಕಮಿಷನರ್ ಅವ್ನಿ ಲವಾಸಾ ಎಎನ್ಐಗೆ ತಿಳಿಸಿದ್ದಾರೆ.
ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 55 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲರನ್ನೂ ತೆರವುಗೊಳಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಗಿದಿದೆ. ಬಸ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದುದ್ದೇ ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಎಸ್ ಎಸ್ ಪಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ