ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ನಕ್ಸಲೀಯರು ಮತ್ತು ಭಯೋತ್ಪಾದಕರಲ್ಲಿ ಧೈರ್ಯ ಹೆಚ್ಚುತ್ತದೆ: ಪ್ರಧಾನಿ ಮೋದಿ ಟೀಕೆ
ಸೂರಜ್ಪುರ(ಛತ್ತೀಸ್ ಗಢ): ಛತ್ತೀಸ್ಗಢ ರಾಜ್ಯದಲ್ಲಿ ನಕ್ಸಲೀಯರ ಹಾವಳಿಯನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ನಕ್ಸಲೀಯರು ಮತ್ತು ಭಯೋತ್ಪಾದಕರು ಮತ್ತೆ ಧೈರ್ಯಶಾಲಿಗಳಾಗಿ ತಮ್ಮ ಚಟುವಟಿಕೆ ಹೆಚ್ಚಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಆಪಾದಿತ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಗುರಿಯಾಗಿಸಿ 30 ಪರ್ಸೆಂಟ್ ಕಮಿಷನ್ ಸರ್ಕಾರ, ಬಹಿರಂಗವಾಗಿ ಬೆಟ್ಟಿಂಗ್ ನಡೆಸುತ್ತಿದೆ ಎಂದು ಘೋಷಣೆ ಕೂಗಿ ಟೀಕಿಸಿದರು.
ಸಿಎಂ ಬಘೇಲ್ ಅವರನ್ನು ರಾಜ್ಯದಲ್ಲಿ ಜನರು ಪ್ರೀತಿಯಿಂದ 'ಕಾಕಾ' (ಚಿಕ್ಕಪ್ಪ) ಎಂದು ಕರೆಯುತ್ತಾರೆ. ರಾಜ್ಯದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಭಯೋತ್ಪಾದಕರು, ನಕ್ಸಲೀಯರು ಭುಗಿಲೇಳುತ್ತಾರೆ.ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಅಪರಾಧ ಮತ್ತು ಲೂಟಿಯ ಆಡಳಿತವಿದೆ. ನಕ್ಸಲ್ ಹಿಂಸಾಚಾರದ ಘಟನೆಗಳನ್ನು ಇಲ್ಲಿ ತಡೆಯಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ಹೇಳಿದರು.

