ಭೋಪಾಲ್: ಮಧ್ಯ ಪ್ರದೇಶದ ವಿವಿಧ ಸ್ಥಳಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಧಾರ್ ಜಿಲ್ಲೆಯ ಉಮರ್ಬನ್ ಗ್ರಾಮದಲ್ಲಿ ಭಾನುವಾರ ಸಂಜೆ ದಂಪತಿಗಳು ಮತ್ತು ಅವರ ಅಪ್ರಾಪ್ತ ಮಗನೊಂದಿಗೆ ಮೋಟಾರ್ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದಿದೆ. ಪರಿಣಾಮ ಮುಖೇಶ್(28) ಮತ್ತು ಅವರ ಪತ್ನಿ ಚಂಪಾ(27) ಸ್ಥಳದಲ್ಲೇ ಮೃತಪಟ್ಟರೆ, ಅವರ 10 ವರ್ಷದ ಮಗನಿಗೆ ಗಂಭೀರವಾದ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಮರಬನ್ ಪೊಲೀಸ್ ಔಟ್ಪೋಸ್ಟ್ ಉಸ್ತುವಾರಿ ಅಧಿಕಾರಿ ಪ್ರಕಾಶ್ ಆಳ್ವಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಝಬುವಾ ಜಿಲ್ಲೆಯಲ್ಲಿ, 45 ವರ್ಷದ ವ್ಯಕ್ತಿಯೊಬ್ಬರು ಸಿಡಿ ಬಡಿದು ಮೃತಪಟ್ಟಿದ್ದಾರೆ. ಅವರು ಭಾನುವಾರ ಸಂಜೆ ಜವಾಲಿಯಾ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಪೆಟ್ಲವಾಡ್ ಪೊಲೀಸ್ ಉಪವಿಭಾಗಾಧಿಕಾರಿ ಸೌರಭ್ ತೋಮರ್ ಅವರು ತಿಳಿಸಿದ್ದಾರೆ.
ಅಲ್ಲದೆ, ಬರ್ವಾನಿ ಜಿಲ್ಲೆಯ ಜುನಾಜಿರಾ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು 48 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಸಿಲಾವಾಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಯೂಬ್ ಶೇಖ್ ತಿಳಿಸಿದ್ದಾರೆ.
Advertisement