ರುಚಿಯಾದ ಆಹಾರ ನೀಡಿಲ್ಲವೆಂದು ಹೆತ್ತತಾಯಿಯನ್ನೇ ಕೊಂದ ಪಾಪಿ ಪುತ್ರ!

ರುಚಿಯಾದ ಅಡುಗೆ ಮಾಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ತಾಯಿಯೊಂದಿಗೆ ಜಗಳವಾಡಿದ ನಂತರ 55 ವರ್ಷದ ತಾಯಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ರುಚಿಯಾದ ಅಡುಗೆ ಮಾಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ತಾಯಿಯೊಂದಿಗೆ ಜಗಳವಾಡಿದ ನಂತರ 55 ವರ್ಷದ ತಾಯಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೇಲು ಗ್ರಾಮದಲ್ಲಿ ಭಾನುವಾರ (ನವೆಂಬರ್‌ 26) ಸಂಜೆ ಕೊಲೆ ನಡೆದಿದೆ. ಅಡುಗೆ ರುಚಿಯಾಗಿ ಮಾಡಿಲ್ಲ ಎಂದು 55 ವರ್ಷದ ತಾಯಿಯನ್ನು ಮಗ ಕೊಂದಿದ್ದಾನೆ ಎಂದು ಪೊಲೀಸರು ಮಂಗಳವಾರ (ನವೆಂಬರ್‌ 28) ಮಾಹಿತಿ ನೀಡಿದ್ದಾರೆ.

ಮನೆ, ಅಡುಗೆ ವಿಚಾರಕ್ಕೆ ಆಗಾಗ ತಾಯಿ ಮಗನ ಮಧ್ಯೆ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿ ಮನೆಗೆ ಬಂದ ಮಗನಿಗೆ ತಾಯಿ ಊಟ ಬಡಿಸಿದ್ದಾಳೆ. ಊಟ ರುಚಿಯಾಗಿಲ್ಲ ಎಂದು ಆತ ತಾಯಿ ಜತೆ ಜಗಳ ಆಡಿದ್ದಾನೆ. ಇದೇ ವೇಳೆ ಆತನು ತಾಯಿಯ ಕತ್ತಿಗೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿದಿನ ರುಚಿಯಾಗಿ ಅಡುಗೆ ಮಾಡಿಲ್ಲ ಎಂದು ವ್ಯಕ್ತಿಯು ತಾಯಿ ಜತೆ ಜಗಳ ಆಡುತ್ತಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ರುಚಿಯಾಗಿ ಅಡುಗೆ ಮಾಡಿಲ್ಲ ಎಂಬ ವಿಷಯಕ್ಕೇ ಕಳೆದ ಭಾನುವಾರ ವ್ಯಕ್ತಿಯು ಕೋಪಗೊಂಡಿದ್ದಾನೆ. ಮೊದಲು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಕುಡಗೋಲಿನಿಂದ ಆಕೆಯ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಯಿ ಮೇಲೆ ಮಗ ಹಲ್ಲೆ ನಡೆಸುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೊಂದೆಡೆ, ತಾಯಿಯನ್ನು ಹತ್ಯೆಗೈದ ವ್ಯಕ್ತಿಯು ನಿದ್ರೆ ಮಾತ್ರೆಗಳನ್ನು ನುಂಗಿದ್ದಾನೆ. ಅಸ್ವಸ್ಥಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಗುಣಮುಖನಾದ ಮೇಲೆ ಪೊಲೀಸರು ಬಂಧಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com