ಗಡಿಯಲ್ಲಿ ಸೇನಾ ಯೋಧರೊಂದಿಗೆ ರಾಜನಾಥ ಸಿಂಗ್ ದಸರಾ ಹಬ್ಬ ಆಚರಣೆ: ಶಸ್ತ್ರ ಪೂಜೆ ಮಾಡಿ ಸೈನಿಕರ ಶ್ಲಾಘನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ದಸರಾದ ಸಾಂಪ್ರಾದಾಯಿಕ 'ಶಸ್ತ್ರ' ಪೂಜೆ  ನೆರವೇರಿಸಿದರು. ಚೀನಾದ ಗಡಿಯ ಸಮೀಪವಿರುವ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಸೇನಾ ಯೋಧರೊಂದಿಗೆ ದಸರಾ ಆಚರಿಸಿದರು.
ಅರುಣಾಚಲ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಶಸ್ತ್ರ ಪೂಜೆ
ಅರುಣಾಚಲ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಶಸ್ತ್ರ ಪೂಜೆ

ನವದೆಹಲಿ:  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ದಸರಾದ ಸಾಂಪ್ರಾದಾಯಿಕ 'ಶಸ್ತ್ರ' ಪೂಜೆ  ನೆರವೇರಿಸಿದರು. ಚೀನಾದ ಗಡಿಯ ಸಮೀಪವಿರುವ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಸೇನಾ ಯೋಧರೊಂದಿಗೆ ದಸರಾ ಆಚರಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಪೂರ್ವ ಲಡಾಕ್‌ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಏರ್ಪಟ್ಟಿರುವಂತೆಯೇ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪದ ಸೇನಾ ನೆಲೆಯಲ್ಲಿ ರಾಜನಾಥ ಸಿಂಗ್ ಸೈನಿಕರೊಂದಿಗೆ ದಸರಾ ಹಬ್ಬ ಆಚರಿಸಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಅರುಣಾಚಲ ಪ್ರದೇಶದ  ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತದ ಮಿಲಿಟರಿ ಸನ್ನದ್ಧತೆಯ ಸಮಗ್ರ ಪರಿಶೀಲನೆಯನ್ನು ನಡೆಸಿದರು. "ಅಚಲ ಬದ್ಧತೆ ಮತ್ತು ಅಪ್ರತಿಮ ಧೈರ್ಯ" ದಿಂದ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರನ್ನು ಶ್ಲಾಘಿಸಿದರು.

ಹಲವು ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸೈನಿಕರೊಂದಿಗಿನ ಸಂವಾದದಲ್ಲಿ  ಮಾತನಾಡಿದ ಸಿಂಗ್, ಪ್ರಸ್ತುತ ಜಾಗತಿಕ ಸನ್ನಿವೇಶದ ದೃಷ್ಟಿಯಿಂದ ದೇಶದ ಭದ್ರತಾ ಉಪಕರಣವನ್ನು ಬಲಪಡಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಪ್ರತಿಪಾದಿಸಿದರು.

ರಕ್ಷಣಾ ಸಾಧನಗಳ ಸ್ಥಳೀಯ ಉತ್ಪಾದನೆಯ ಮೂಲಕ ರಾಷ್ಟ್ರದ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಕಷ್ಟದ ಸಂದರ್ಭಗಳಲ್ಲಿ ನೀವು ಗಡಿಯನ್ನು ಕಾಪಾಡುತ್ತಿರುವ ರೀತಿಗೆ ಎಷ್ಟೇ ಮೆಚ್ಚುಗೆ ಸೂಚಿಸಿದರೂ ಸಾಕಾಗುವುದಿಲ್ಲ. ದೇಶದ ಜನರು ನಿಮ್ಮ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಎಂದು ಅವರು ಸೈನಿಕರಿಗೆ  ತಿಳಿಸಿದರು.

ರಾಜನಾಥ ಸಿಂಗ್ ಅವರು, ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗಲೂ ಸೇರಿದಂತೆ ಕಳೆದ ಹಲವು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಇಲ್ಲಿಗೆ ಬಂದು ಶಸ್ತ್ರ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com