ರಾವಣನ ದುರಹಂಕಾರ, ಕಂಸನ ಘರ್ಜನೆಯಿಂದ ಧರ್ಮ ಅಳಿಸಲು ಸಾಧ್ಯವಾಗಿಲ್ಲ: ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಸಾಧ್ಯವೇ?

ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಪರವಾಲಂಬಿಗಳಿಂದ ಈಗಲೂ ಅದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಕ್ನೋ:  ಅನಾದಿ ಕಾಲದಿಂದಲೂ ಸನಾತನ ಧರ್ಮದ ಮೇಲೆ ಹಲವು ದಾಳಿಗಳಾಗಿವೆ. ಆದರೆ ಧರ್ಮಕ್ಕೆ ಹಾನಿ ಮಾಡಲು ಅವುಗಳಿಂದ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಪರವಾಲಂಬಿಗಳಿಂದ ಈಗಲೂ ಅದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ಅವರು,  ರಾವಣನ ದುರಹಂಕಾರ ಸನಾತನ ಧರ್ಮವನ್ನು ಅಳಿಸಲಾಗಲಿಲ್ಲ. ಕಂಸನ ಘರ್ಜನೆ ಧರ್ಮವನ್ನು ಅಲುಗಾಡಿಸಲಾಗಲಿಲ್ಲ. ಬಾಬರ್‌ ಮತ್ತು ಔರಂಗಜೇಬನ ದೌರ್ಜನ್ಯಗಳೂ ಸನಾತನ ಧರ್ಮವನ್ನು ಏನೂ ಮಾಡಲು ಆಗಲಿಲ್ಲ. ಈಗ ಈ ಅಧಿಕಾರ ದಾಹವುಳ್ಳ ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಅಳಿಸಿಹಾಕಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ಸಮಾನತೆ, ಸಾಮಾಜಿಕ ನ್ಯಾಯದ ವಿರುದ್ಧ ಸನಾತನ ಧರ್ಮವಿದೆ ಎಂದು ಆರೋಪಿಸಿದ್ದ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್‌, ಅದನ್ನು ಡೆಂಗಿ ಮತ್ತು ಮಲೇರಿಯಾಗೆ ಹೋಲಿಸಿ, ನಿರ್ಮೂಲನೆಗೆ ಅಗತ್ಯ ಎಂದಿದ್ದರು ಎಂದು ವರದಿಯಾಗಿತ್ತು.  

ಯೋಗಿ ಆದಿತ್ಯನಾಥ್ ಅವರು ಯಾರ ಹೆಸರನ್ನೂ ತೆಗೆದುಕೊಳ್ಳದೇ, ‘ಸತಾನ ಧರ್ಮದ ಮೇಲೆ ದುರುದ್ದೇಶಪೂರಿತ ದಾಳಿ ನಡೆಸುವ ಮೂಲಕ ಮಾನವೀಯತೆಯನ್ನೇ ತೊಂದರೆಗೆ ಸಿಲುಕಿಸವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಸನಾತನ ಧರ್ಮವು ಸೂರ್ಯನಂತೆಯೇ ಶಕ್ತಿಯ ಮೂಲ. ಸೂರ್ಯನತ್ತ ಉಗಿಯುವ ಆಲೋಚನೆಯನ್ನು ಒಬ್ಬ ಮೂರ್ಖನಷ್ಟೇ ಮಾಡಬಲ್ಲ. ವಾಸ್ತವದಲ್ಲಿ ತನ್ನ ಮುಖದ ಮೇಲೇ ಬೀಳುತ್ತದೆ. ಇಂಥ ತಪ್ಪುಗಳಿಂದಾಗಿ ಅವರ ಮುಂದಿನ ತಲೆಮಾರುಗಳು ಅವಮಾನದಿಂದ ಬದುಕಬೇಕಾಗಲಿದೆ. ಭಾರತದ ಭವ್ಯ ಪರಂಪರೆ ಕುರಿತು ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು’ ಎಂದು ಯೋಗಿ ಹೇಳಿದ್ದಾರೆ.

‘ದೇವರನ್ನು ಅಳಿಸಿಹಾಕಲು ಹೊರಟವರು ಅವರೇ ನಾಶವಾಗಿದ್ದಾರೆ. 500 ವರ್ಷಗಳ ಹಿಂದೆಯೂ ಸನಾತನ ಧರ್ಮವನ್ನು ಅವಮಾನಿಸಲಾಗಿತ್ತು. ಆದರೆ ಇಂದು ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ದೇಶದ ಪ್ರಗತಿಯಲ್ಲಿ ಅಡ್ಡಗಾಲು ಹಾಕುತ್ತಿವೆ. ಆದರೆ ಅವುಗಳ ಪ್ರಯತ್ನ ಕೈಗೂಡದು’ ಎಂದು ಕಿಡಿಯಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com