ಭೋಪಾಲ್: ನಾನು ರಾಜಕೀಯ ಬಿಟ್ಟಿಲ್ಲ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕಿ ಮತ್ತು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉಮಾ ಭಾರತಿ, ನಾನು ದೀರ್ಘಕಾಲದಿಂದ ರಾಜಕೀಯದಲ್ಲಿ ಕೆಲಸ ಮಾಡುತ್ತಿರುವುದರಿಂದ ಐದು ವರ್ಷಗಳ ಕಾಲ ವಿರಾಮ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ದೀರ್ಘ ಕಾಲದಿಂದ ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದರಿಂದ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದೆ. ಐದು ವರ್ಷ ಬಿಡುವು ಮಾಡಿಕೊಳ್ಳಲು ಯೋಚಿಸಿದ್ದೆ. ಆದರೆ ರಾಜಕೀಯ ಬಿಟ್ಟಿದ್ದೇನೆ ಎಂದು ಜನ ಅಂದುಕೊಂಡಿದ್ದರು, ನಾನೇನು ರಾಜಕೀಯ ಬಿಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ ಮತ್ತು ಲಲಿತ್ಪುರ-ಸಿಂಗ್ರೌಲಿ ರೈಲು ಮಾರ್ಗ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಉಮಾ ಭಾರತಿ, ನಾನು ರಾಜಕೀಯದಲ್ಲಿರುವುದರಿಂದ ಈ ಯೋಜನೆಗಳು ಸಾಕಾರಗೊಂಡವು ಎಂದರು.
"ನನಗೆ 75 ವರ್ಷ ಅಥವಾ 85 ವರ್ಷವಾಗಲಿ, ನಾನು ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನಗೆ ರಾಜಕೀಯವೆಂದರೆ ತುಂಬಾ ಇಷ್ಟ" ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಹೇಳಿದ್ದಾರೆ.
ರಾಜಕೀಯ ಒಂದು ಐಷಾರಾಮಿ ಜೀವನ ಎಂದು ಪರಿಗಣಿಸುವವರಿಂದ ಹಾಳಾಗಿದೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
Advertisement