ಪ್ರತಿಭಟಿಸಲು, ವಿರೋಧಿಸಲು ಸಮಯವಿದೆ, ಈ ಸಣ್ಣ ಅವಧಿಯ ವಿಶೇಷ ಅಧಿವೇಶನವನ್ನು ಸದ್ಭಳಕೆ ಮಾಡೋಣ: ಪ್ರಧಾನಿ ಮೋದಿ

ಸಂಸತ್ತಿನ ಈ ವಿಶೇಷ ಅಧಿವೇಶನದ ಅವಧಿ ಚಿಕ್ಕದಾಗಿದ್ದರೂ ಕೂಡ ಸಮಯ ಬಹಳ ಮಹತ್ವದ್ದಾಗಿದ್ದು, ದೊಡ್ಡದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ಈ ಅಧಿವೇಶನದ ವಿಶೇಷತೆ ಏನೆಂದರೆ ಸ್ವಾತಂತ್ರ್ಯ ನಂತರ ಭಾರತದ 75 ವರ್ಷಗಳ ಪಯಣ ಹೊಸ ಗಮ್ಯದಿಂದ ಆರಂಭವಾಗುತ್ತಿದೆ.
ವಿಶೇಷ ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಪ್ರಧಾನಿ ಮೋದಿ
ವಿಶೇಷ ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಪ್ರಧಾನಿ ಮೋದಿ

ನವ ದೆಹಲಿ: ಸಂಸತ್ತಿನ ಈ ವಿಶೇಷ ಅಧಿವೇಶನದ ಅವಧಿ ಚಿಕ್ಕದಾಗಿದ್ದರೂ ಕೂಡ ಸಮಯ ಬಹಳ ಮಹತ್ವದ್ದಾಗಿದ್ದು, ದೊಡ್ಡದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ಈ ಅಧಿವೇಶನದ ವಿಶೇಷತೆ ಏನೆಂದರೆ ಸ್ವಾತಂತ್ರ್ಯ ನಂತರ ಭಾರತದ 75 ವರ್ಷಗಳ ಪಯಣ ಹೊಸ ಗಮ್ಯದಿಂದ ಆರಂಭವಾಗುತ್ತಿದೆ. ಈಗ ಹೊಸ ಜಾಗದಿಂದ ಪಯಣವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವಾಗಲೇ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಿದೆ. ಮುಂಬರುವ ಎಲ್ಲಾ ನಿರ್ಧಾರಗಳನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಆರಂಭಕ್ಕೆ ಮುನ್ನ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ಚಿಕ್ಕ ಅಧಿವೇಶನ. ಸಂಸದರು ಉತ್ಸಾಹದಿಂದ ಪಾಲ್ಗೊಂಡು ಅಧಿವೇಶನಕ್ಕೆ ಗರಿಷ್ಠ ಸಮಯವನ್ನು ಮೀಸಲಿಡಬೇಕು. ಪ್ರತಿಭಟಿಸಲು ಸಾಕಷ್ಟು ಸಮಯವಿದೆ, ಅದನ್ನು ಮಾಡುತ್ತಲೇ ಇರಬಹುದು. ಜೀವನದಲ್ಲಿ ಕೆಲವು ಕ್ಷಣಗಳು ನಿಮ್ಮಲ್ಲಿ ಉತ್ಸಾಹ ಮತ್ತು ನಂಬಿಕೆಯನ್ನು ತುಂಬುತ್ತವೆ. ನಾನು ಈ ಕಿರು ಅಧಿವೇಶನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದನ್ನು ನೋಡುತ್ತೇನೆ ಎಂದರು.

G20 ಶೃಂಗಸಭೆಯ ಸಮಯದಲ್ಲಿ ನಾವು ಜಾಗತಿಕ ದಕ್ಷಿಣದ ಧ್ವನಿಯಾಗಿದ್ದೇವೆ. ಆಫ್ರಿಕನ್ ಯೂನಿಯನ್ G20 ಯ ಖಾಯಂ ಸದಸ್ಯತ್ವ ಪಡೆದಿದೆ ಎಂದು ಭಾರತವು ಯಾವಾಗಲೂ ಹೆಮ್ಮೆಪಡುತ್ತದೆ. ಇದೆಲ್ಲವೂ ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿದೆ. ನಿನ್ನೆ 'ಯಶೋಭೂಮಿ' ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಾಗಿದೆ. ಇವುಗಳೆಲ್ಲಾ ನವ ಭಾರತದ ಸಂಕೇತವಾಗಿದೆ ಎಂದರು.

ನಾಳೆ ಗಣೇಶ ಚತುರ್ಥಿಯಂದು ನಾವು ಹೊಸ ಸಂಸತ್ತು ಕಟ್ಟಡಕ್ಕೆ ಪ್ರವೇಶಿಸುತ್ತಿದ್ದೇವೆ. ಗಣೇಶನಿಗೆ 'ವಿಘ್ನಹರ್ತಾ' ಎಂಬ ಹೆಸರಿದೆ, ಈಗ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲ. ಭಾರತವು ತನ್ನ ಎಲ್ಲಾ ಕನಸುಗಳು ಮತ್ತು ನಿರ್ಣಯಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಈಡೇರಿಸುತ್ತದೆ. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಇದು ವ್ಯಾಪ್ತಿಯಲ್ಲಿ ಐತಿಹಾಸಿಕವಾಗಿದೆ ಎಂದರು. 

ಇಂದಿನಿಂದ ಆರಂಭವಾಗುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು ಕೆಳಮನೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಮಾತನಾಡಲಿದ್ದಾರೆ.

ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಇಂದು ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನಾಳೆ ಸೆಪ್ಟೆಂಬರ್ 19 ರಂದು ಸಂಸತ್ತಿನ ಕಲಾಪಗಳು ಹಳೆಯದರಿಂದ ಪಕ್ಕದ ಹೊಸ ಅತ್ಯಾಧುನಿಕ ಕಟ್ಟಡಕ್ಕೆ ಬದಲಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com