ಚೆನ್ನೈ: ಕಾವೇರಿ ವಿವಾದ ಭುಗಿಲೆದ್ದಿದ್ದು ಕರ್ನಾಟಕ-ತಮಿಳುನಾಡು ನಡುವೆ ಮತ್ತೆ ತಿಕ್ಕಾಟ ಪ್ರಾರಂಭವಾಗಿದೆ. ಈ ನಡುವೆ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧಕ್ಕೆ ಕರೆ ನೀಡಿದ್ದಾರೆ.
ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧವಿದ್ದರಷ್ಟೇ ಭಾಷಿಕ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ ಅವರು ನಿರ್ಭಯದಿಂದ ಬದುಕಲು ಸಾಧ್ಯ ಎಂದು ತಮಿಳುನಾಡು ಸಚಿವ ಹೇಳಿದ್ದಾರೆ. ಇದೇ ವೇಳೆ ತಮಿಳು ನಟ ಸಿದ್ಧರ್ಥ್ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದಾಗ ಕಾವೇರಿ ವಿಷಯದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಮಾಧ್ಯಮಗೋಷ್ಠಿಗೆ ಅಡ್ಡಿಪಡಿಸಿದ್ದನ್ನು ಅನಪೇಕ್ಷಿತವಾದದ್ದು ಎಂದು ಹೇಳಿದ್ದಾರೆ.
ಕರ್ನಾಟಕ ಸುಪ್ರೀಂ ಕೋರ್ಟ್ ತೀರ್ಪು, ಸಿಡಬ್ಲ್ಯುಎಂಎಗೆ ಅಥವಾ ತಮಿಳುನಾಡು ಸಿಎಂ ಮನವಿಗೆ ಸ್ಪಂದಿಸದೇ ಇರುವುದನ್ನು ಅನ್ಯಾಯ ಎಂದು ಹೇಳಿರುವ ದುರೈ ಮುರುಗನ್, ಕರ್ನಾಟಕ ನೈಸರ್ಗಿಕ ನ್ಯಾಯದ ಕಾನೂನನ್ನು ಎತ್ತಿಹಿಡಿಯಲು ನಿರಾಕರಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸಾವಿರಾರು ಮಂದಿ ತಮಿಳುನಾಡಿನ ಮೂಲದ ಮಂದಿ ಇದ್ದಾರೆ. ತಮಿಳುನಾಡಿನಲ್ಲಿ ಸಾವಿರಾರು ಮಂದಿ ಕನ್ನಡಿಗರಿದ್ದಾರೆ ಎರಡೂ ರಾಜ್ಯಗಳು ಗಡಿ ಹಂಚಿಕೊಂಡಿವೆ. ದಿನನಿತ್ಯ ಎರಡೂ ರಾಜ್ಯಗಳ ನಡುವೆ ಸಂಚಾರವಿದೆ. ಆದ್ದರಿಂದ ಎರಡೂ ರಾಜ್ಯಗಳು ಸೌಹಾರ್ದತೆ ಮತ್ತು ಪ್ರೀತಿಯನ್ನು ಹಂಚಿಕೊಂಡಾಗ ಮಾತ್ರ ಬೇರೆ ರಾಜ್ಯದಲ್ಲಿ ವಾಸಿಸುವವರು ನಿರ್ಭಯವಾಗಿ ಬದುಕಲು ಸಾಧ್ಯ ಎಂದು ಸಚಿವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಸಾಮಾನ್ಯ ರಾಜಕಾರಣಿಗಳಲ್ಲ, ನುರಿತ ರಾಜಕಾರಣಿಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆಗಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ ಎಂದೂ ದುರೈಮುರುಗನ್ ಹೇಳಿದ್ದಾರೆ.
Advertisement