ಮಧ್ಯಪ್ರದೇಶದಲ್ಲಿ ಹೊಸ ಮುಖಕ್ಕೆ ಮಣೆ; ಮುಖ್ಯಮಂತ್ರಿ ಆಗಿ ಮೋಹನ್ ಯಾದವ್ ಆಯ್ಕೆ!

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಮೋಹನ್ ಯಾದವ್ ಹೆಸರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತ ಮೂಡಿದೆ.
ಮೋಹನ್ ಯಾದವ್
ಮೋಹನ್ ಯಾದವ್

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಮೋಹನ್ ಯಾದವ್ ಹೆಸರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತ ಮೂಡಿದೆ. 

ಮಾಹಿತಿ ಪ್ರಕಾರ, ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಮೋಹನ್ ಯಾದವ್ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಈ ಘೋಷಣೆಯೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಈಗ ರಾಜ್ಯದ ಆಡಳಿತ ಮೋಹನ್ ಯಾದವ್ ಕೈಯಲ್ಲಿರಲಿದೆ. ಇನ್ನು ಮಧ್ಯಪ್ರದೇಶದ ಸ್ಪೀಕರ್ ಆಗಿ ನರೇಂದ್ರ ಸಿಂಗ್ ತೋಮರ್ ಅವರನ್ನು ಆಯ್ಕೆ ಮಾಡಲಾಗಿದೆ. ಛತ್ತೀಸಗಢದಂತೆ ಮಧ್ಯಪ್ರದೇಶದಲ್ಲೂ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

58 ವರ್ಷದ ಮೋಹನ್ ಯಾದವ್ ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿದ್ದಾರೆ. 2018ರಲ್ಲಿ ಶಿವರಾಜ್ ಸರ್ಕಾರದಲ್ಲಿ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು. ಮೋಹನ್ ಯಾದವ್ ಸಂಘಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಸಂಘದ ಹಲವು ಹುದ್ದೆಗಳಲ್ಲಿ ಸುದೀರ್ಘ ಕಾಲ ಕೆಲಸ ಮಾಡಿರುವ ಇವರು ವಿದ್ಯಾರ್ಥಿ ಪರಿಷತ್ತಿನಲ್ಲೂ ಸೇವೆ ಸಲ್ಲಿಸಿದ್ದಾರೆ. ಮೋಹನ್ ಯಾದವ್ ಒಬಿಸಿ ವರ್ಗದಿಂದ ಬಂದವರು.

ಮಧ್ಯಾಹ್ನದ ನಂತರ ಭೋಪಾಲ್‌ನ ಬಿಜೆಪಿ ಕಚೇರಿಯ ಗದ್ದಲ ತೀವ್ರಗೊಂಡಿತ್ತು. ಕಚೇರಿಯ ಹೊರಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶಾಸಕಾಂಗ ಪಕ್ಷದ ಸಭೆ ಒಳಗೆ ನಡೆಯುತ್ತಿದ್ದಾಗ ಹೊರಗೆ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಿ ಮೋದಿ ಮತ್ತು ಇತರ ಕೆಲವು ನಾಯಕರ ಹೆಸರುಗಳೊಂದಿಗೆ ಘೋಷಣೆಗಳು ಎದ್ದವು. ಆದರೆ ಮೋಹನ್ ಯಾದವ್ ಹೆಸರು ಬಂದಾಗ ಎಲ್ಲರಿಗೂ ಅಚ್ಚರಿಯಾಯಿತು.

ಈ ಮಹತ್ವದ ನಿರ್ಧಾರಕ್ಕೂ ಮುನ್ನ ಬಿಜೆಪಿ ಹೈಕಮಾಂಡ್ ವೀಕ್ಷಕರ ತಂಡವನ್ನು ಇಂದು ಭೋಪಾಲ್‌ಗೆ ಕಳುಹಿಸಿತ್ತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಆಶಾ ಲಾಕ್ರಾ ಮತ್ತು ಕೆ ಲಕ್ಷ್ಮಣ್ ಶಾಸಕ ಸಭೆ ನಡೆಸಿದ್ದರು.

ನವೆಂಬರ್ 17 ರಂದು ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು. ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ 66 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಭಾರತ ಆದಿವಾಸಿ ಪಕ್ಷವು ಒಂದು ಸ್ಥಾನದಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ಶೇ.48.55ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ ಶೇ.40.40ರಷ್ಟು ಮತದಾರರಿಂದ ಆಯ್ಕೆಯಾಗಿದೆ.

ಬಿಜೆಪಿ ಯಾರನ್ನೂ ತನ್ನ ಮುಖವನ್ನಾಗಿಸಿಕೊಂಡಿರಲಿಲ್ಲ:
ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾರನ್ನೂ ಮುಖ್ಯಮಂತ್ರಿ ಮುಖ ಎಂದು ಘೋಷಿಸಿರಲಿಲ್ಲ. ಪಕ್ಷವು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೂ, ಚುನಾವಣೆಯಲ್ಲಿ ಗೆದ್ದ ನಂತರ ಶಿವರಾಜ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಇಲ್ಲವೇ ಎಂದು ಹೇಳಲಾಗಿಲ್ಲ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ ಎಂದು ಸ್ವತಃ ಶಿವರಾಜ್ ಸಿಂಗ್ ಅವರು ಹಲವು ಬಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com