ಕೇಂದ್ರ ಸರ್ಕಾರ ಸಂಸತ್ತನ್ನು 'ರಬ್ಬರ್ ಸ್ಟಾಂಪ್' ಆಗಿ ಮಾಡಿದೆ: ಖರ್ಗೆ

ಸಂಸದರು ಜನರ ಪರವಾಗಿ ಧ್ವನಿ ಎತ್ತಲು ಹಾಗೂ  ಅದಾನಿ- ಹಿಂಡೆನ್ ಬರ್ಗ್ ವಿಚಾರವನ್ನು ಜೆಪಿಸಿ ತನಿಖೆಗೆ ಒಪ್ಪಿಸುವ ಬೇಡಿಕೆಗೆ ಒಪ್ಪದ ಸರ್ಕಾರ ಸಂಸತನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಂಸದರು ಜನರ ಪರವಾಗಿ ಧ್ವನಿ ಎತ್ತಲು ಹಾಗೂ  ಅದಾನಿ- ಹಿಂಡೆನ್ ಬರ್ಗ್ ವಿಚಾರವನ್ನು ಜೆಪಿಸಿ ತನಿಖೆಗೆ ಒಪ್ಪಿಸುವ ಬೇಡಿಕೆಗೆ ಒಪ್ಪದ ಸರ್ಕಾರ ಸಂಸತನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಂಸದರೊಬ್ಬರ ಟೀಕೆ ಮತ್ತು ಅಮಾನತಿನ ಹೇಳಿಕೆಯನ್ನು ಉಲ್ಲೇಖಿಸಿ ಈ ರೀತಿ ಹೇಳಿರುವ ಖರ್ಗೆ,  ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು, 2024ರಲ್ಲಿ ಕಾಂಗ್ರೆಸ್ ದೋಸ್ತಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದರು.

ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಜನರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವಂತೆ ಮನವಿ ಮಾಡಿದರು. ಇಲ್ಲದಿದ್ದರೆ ಸರ್ವಾಧಿಕಾರ ಬಂದು ಎಲ್ಲರನ್ನೂ ಮುಗಿಸುತ್ತದೆ ಎಂದು ಹೇಳಿದರು. 

ಅದಾನಿ ವಿವಾದವನ್ನು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷರು,  ಸರ್ಕಾರ ಬಂಡವಾಳಶಾಹಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಸಂಸತ್ತನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಿದೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಂದಾದರೆ ನೋಟಿಸ್ ನೀಡಲಾಗುತ್ತದೆ. ಒಬ್ಬ ಮಹಿಳಾ ಸಂಸದರನ್ನು ಅಮಾನತುಗೊಳಿಸಲಾಗಿದೆ, ಏಕೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸಂಸದರು  ಜನರ ಸಮಸ್ಯೆಗಳು ಮತ್ತು ಅದಾನಿ ವಿರುದ್ಧ ಧ್ವನಿ ಎತ್ತುತ್ತಿದ್ದರು ಎಂದರು.

2004 ರಿಂದ ಅದಾನಿ ಸಂಪತ್ತು 3,000 ಕೋಟಿಯಿಂದ 12 ಲಕ್ಷ ಕೋಟಿಗೆ ಏರಿದೆ. ಅಲ್ಲಿ ಏನು ಮ್ಯಾಜಿಕ್ ನಡೆದಿದೆ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಆದರೆ, ನಮ್ಮ ಪಕ್ಷದ ಸಂಸದರ ಮಾತುಗಳನ್ನು ಕಡತಗಳಿಂದ ತೆಗೆದುಹಾಕಲಾಗಿದೆ ಎಂದು ಖರ್ಗೆ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com