ಉತ್ತರಾಖಂಡ: ಜೋಶಿಮಠದಲ್ಲಿ ದೇವಾಲಯ ಕುಸಿತ ಬಳಿಕ ಕರ್ಣಪ್ರಯಾಗ್ ಸರದಿ; 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜೋಶಿಮಠದಲ್ಲಿ ನಿನ್ನೆ ದೇವಾಲಯ ಕುಸಿದುಬಿದ್ದು ಈಗಾಗಲೇ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು, ಕರ್ಣಪ್ರಯಾಗದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಇನ್ನಷ್ಟು ಭಯಭೀತರಾಗಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭೂಕುಸಿತದಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭೂಕುಸಿತದಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು

ಡೆಹ್ರಾಡೂನ್: ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜೋಶಿಮಠದಲ್ಲಿ ನಿನ್ನೆ ದೇವಾಲಯ ಕುಸಿದುಬಿದ್ದು ಈಗಾಗಲೇ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು, ಕರ್ಣಪ್ರಯಾಗದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಇನ್ನಷ್ಟು ಭಯಭೀತರಾಗಿದ್ದಾರೆ.

ಕರ್ಣಪ್ರಯಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ‘ಭೂಮಿ ಮುಳುಗಡೆ’ಯ ಘಟನೆಗಳೂ ಇಲ್ಲಿ ವರದಿಯಾಗಿವೆ. ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಸೇರಿದಂತೆ ತಜ್ಞ ಭೂವಿಜ್ಞಾನಿಗಳ ತಂಡವು ಜೋಶಿಮಠದಲ್ಲಿ ಭೂ ಮುಳುಗಡೆ ಪೀಡಿತ ಪ್ರದೇಶಗಳ ಆಳವಾದ ಸಮೀಕ್ಷೆಯನ್ನು ನಡೆಸಿದೆ. ಜೋಶಿಮಠದಲ್ಲಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.

ಈ ವೇಳೆ ಜೋಶಿಮಠದ ಮನೋಹರ್ ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್, ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪೀಡಿತ ಪ್ರದೇಶಗಳಲ್ಲಿ ತಂಡ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿತು. ಅವರು ತಪೋವನಕ್ಕೆ ಭೇಟಿ ನೀಡಿ ಎನ್‌ಟಿಪಿಸಿ ಸುರಂಗದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸುಮಾರು 50,000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರದಲ್ಲಿದೆ. ಜೋಶಿಮಠವು 1,890 ಮೀಟರ್ ಎತ್ತರದಲ್ಲಿದೆ. ಕರ್ಣಪ್ರಯಾಗವು ಜೋಶಿಮಠದಿಂದ 80 ಕಿ.ಮೀ ದೂರದಲ್ಲಿದೆ.

ಬಹುಗುಣನಗರ, ಸಿಎಂಪಿ ಬ್ಯಾಂಡ್ ಮತ್ತು ಕರ್ಣಪ್ರಯಾಗದ ಸಬ್ಜಿ ಮಂಡಿಯ ಮೇಲ್ಭಾಗದಲ್ಲಿ ವಾಸಿಸುವ 50 ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿವೆ. ಇಲ್ಲಿ ಮನೆಗಳ ಗೋಡೆ, ಅಂಗಳದಲ್ಲಿ ಬಿರುಕು ಬಿಟ್ಟಿರುವ ಮನೆಗಳ ಮೇಲ್ಛಾವಣಿ ಅನಾಹುತ ಉಂಟಾಗುವ ಮುನ್ಸೂಚನೆ ನೀಡುತ್ತಿವೆ. ಪಂಕಜ್ ದಿಮ್ರಿ, ಉಮೇಶ್ ರಟೂರಿ, ಬಿಪಿ ಸತಿ, ರಾಕೇಶ್ ಖಂಡೂರಿ, ಹರೇಂದ್ರ ಬಿಷ್ಟ್, ರವಿದತ್ ಸತಿ, ದರ್ವಾನ್ ಸಿಂಗ್, ದಿಗಂಬರ್ ಸಿಂಗ್ ಮತ್ತು ಗಬ್ಬರ್ ಸಿಂಗ್ ಸೇರಿದಂತೆ 25 ಮನೆಗಳು ಬಿರುಕು ಬಿಟ್ಟಿವೆ.

ಜೋಶಿಮಠದಲ್ಲಿ ಭೂ ಕುಸಿತದ ಕುರಿತು ‘ಕ್ಷಿಪ್ರ ಅಧ್ಯಯನ’ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ. ಸಮಿತಿಯು ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com