ಚೆನ್ನೈ: ಕೆಲವು ದಿನಗಳ ಹಿಂದೆ ಮಧುರೈ ಸಂಸದ ಸು ವೆಂಕಟೇಶನ್ ವಿರುದ್ಧ ಟ್ವೀಟ್ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ ಜಿ ಸೂರ್ಯ ಅವರನ್ನು ಮದುರೈ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ನಿನ್ನೆ ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ಮಲದಿಂದ ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸಿದ ನಂತರ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಕ್ಕೆ ವೆಂಕಟೇಶನ್ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿ ಸೂರ್ಯ ಟ್ವೀಟ್ನಲ್ಲಿ ಆರೋಪಿಸಿದ್ದರು. ಸಂಸದ ವೆಂಕಟೇಶನಿಗೆ ಬರೆದ ಪತ್ರದಲ್ಲಿ ಸೂರ್ಯ ಘಟನೆಯನ್ನು ತೀವ್ರವಾಗಿ ಟೀಕಿಸಿದ್ದರು.
"ನಿಮ್ಮ ಪ್ರತ್ಯೇಕತಾವಾದದ ನಕಲಿ ರಾಜಕೀಯವು ಆ ಮೋರಿಗಿಂತ ಕೆಟ್ಟದಾಗಿ ಗಬ್ಬು ನಾರುತ್ತಿದೆ, ಮನುಷ್ಯನಾಗಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ, ಎಂದು ಸೂರ್ಯ ಟ್ವೀಟ್ ಮಾಡಿದ್ದರು. ಇದು ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ.
ಬಂಧನವನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ಜಿ ಸೂರ್ಯ ಅವರನ್ನು ಬಂಧಿಸಿರುವುದು ಖಂಡನೀಯ. ಡಿಎಂಕೆಯ ಮಿತ್ರಪಕ್ಷಗಳಾದ ಕಮ್ಯುನಿಸ್ಟರ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದರೆ ತಪ್ಪು, ಅಪರಾಧವಾಗುತ್ತದೆ. ಈ ಬಂಧನಕ್ಕೆ ನಾವು ಹೆದರುವುದಿಲ್ಲ. ಸತ್ಯದ ಕಡೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.
ಚೆನ್ನೈ ಮೆಟ್ರೋಪಾಲಿಟನ್ ಸೆಷನ್ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಇಂಧನ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದ್ದು, ಜೂನ್ 23, 2023 ರವರೆಗೆ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ಕಳುಹಿಸಿದ ಬೆನ್ನಲ್ಲೇ ಈ ಬಂಧನವಾಗಿದೆ.
Advertisement