ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹೈದರಾಬಾದ್ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧನ: ಬಿಆರ್ ಎಸ್ ಕಾರ್ಯಕರ್ತರಲ್ಲಿ ಆತಂಕ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಹೈದರಾಬಾದ್ ಮೂಲದ ಉದ್ಯಮಿ ಮತ್ತು ‘ಸೌತ್ ಗ್ರೂಪ್’ ನ ಮುಂಚೂಣಿ ಅಧಿಕಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ನಿನ್ನೆ ಮಂಗಳವಾರ ಬಂಧಿಸಿದ ನಂತರ ಭಾರತ್ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರಿಗೆ ಆತಂಕ ಶುರುವಾಗಿದೆ. 
ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ
ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಹೈದರಾಬಾದ್ ಮೂಲದ ಉದ್ಯಮಿ ಮತ್ತು ‘ಸೌತ್ ಗ್ರೂಪ್’ ನ ಮುಂಚೂಣಿ ಅಧಿಕಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ನಿನ್ನೆ ಮಂಗಳವಾರ ಬಂಧಿಸಿದ ನಂತರ ಭಾರತ್ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರಿಗೆ ಆತಂಕ ಶುರುವಾಗಿದೆ. 

ಕಳೆದ ವರ್ಷ ಹಗರಣ ಭುಗಿಲೆದ್ದ ನಂತರ ರದ್ದುಪಡಿಸಲಾದ ಪರಿಷ್ಕೃತ ದೆಹಲಿ ಮದ್ಯ ನೀತಿಯ ಅಡಿಯಲ್ಲಿ ಅರುಣ್ ಪಿಳ್ಳೈ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಬಿಆರ್‌ಎಸ್ ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ ಅವರ ಪರವಾಗಿ ಅಬಕಾರಿ ಟೆಂಡರ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪಿಳ್ಳೈ ಬಂಧನ ಬಿಆರ್ ಎಸ್ ಪಕ್ಷಕ್ಕೆ ಆಘಾತವನ್ನುಂಟುಮಾಡಿದೆ. ಈ ಪ್ರಕರಣದಲ್ಲಿ ರಾಮಚಂದ್ರ ಪಿಳ್ಳೈ ಕವಿತಾ ಅವರ ಮುಂದಾಳು ಆಗಿದ್ದರು ಎಂದು ಇಡಿ ವಿವರಿಸಿದೆ. ಪಿಳ್ಳೈ ಅವರನ್ನು ಇಡಿ ಮತ್ತು ಬುಚ್ಚಿ ಬಾಬು ಅವರನ್ನು ಸಿಬಿಐ ಬಂಧಿಸಿರುವುದು (ಷರತ್ತುಬದ್ಧ ಜಾಮೀನು ಪಡೆದವರು) ಮುಂದೇನು ಎಂದು ಬಿಆರ್‌ಎಸ್ ಕಾರ್ಯಕರ್ತರನ್ನು ಆತಂಕಕ್ಕೀಡು ಮಾಡಿದೆ.

ಅಬಕಾರಿ ಹಗರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಕವಿತಾ ನಿರಾಕರಿಸುತ್ತಾ ಬಂದಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ. ಬಿಜೆಪಿ ತಮ್ಮ ತಂದೆಯ ಮೇಲೆ ಗುರಿಯಾಗಿರಿಸಿಕೊಂಡಿದ್ದು ತೆಲಂಗಾಣದಲ್ಲಿ ಬಿಆರ್ ಎಸ್ ನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕೇಂದ್ರ ಹೈಕಮಾಂಡ್ ನಡೆಸುತ್ತಿರುವ ಕುತಂತ್ರವಿದು ಎಂದು ಆರೋಪಿಸಿದ್ದಾರೆ. 

ಈ ಮಧ್ಯೆ, ತೆಲಂಗಾಣ ಜಾಗೃತಿ ಬ್ಯಾನರ್ ಅಡಿಯಲ್ಲಿ ಕವಿತಾ ಅವರು ಇದೇ ಮಾರ್ಚ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ, ಕೇಂದ್ರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಕವಿತಾ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಭಾಗವಹಿಸುವಿಕೆ ಇರುತ್ತದೆ. ಜಾರಿ ನಿರ್ದೇಶನಾಲಯವು ಈಗಾಗಲೇ ಸುಮಾರು 13 ಬಾರಿ ಅರುಣ್ ಪಿಳ್ಳೈ ಅವರನ್ನು ಪ್ರಶ್ನಿಸಿದೆ. ಅವರು ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಮಾಡಿದೆ. ಮುಂದೆ ಕವಿತಾ ಅವರನ್ನು ಇಡಿ ಪ್ರಶ್ನಿಸಲಿದೆಯೇ ಎಂದು ಪಕ್ಷದ ಕಾರ್ಯಕರ್ತರ ಆತಂಕವಾಗಿದೆ. 

ಸಿಬಿಐ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಆರ್‌ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ಹಗರಣದಲ್ಲಿ ಸಾಕ್ಷಿಯಾಗಿ ಕವಿತಾ ಅವರ ಹೇಳಿಕೆಯನ್ನು ದಾಖಲಿಸಿದೆ. ಜಾರಿ ನಿರ್ದೇಶನಾಲಯವು ಅರುಣ್ ಪಿಳ್ಳೈ ಮತ್ತು ಬುಚ್ಚಿ ಬಾಬು ಇಬ್ಬರನ್ನೂ ಒಟ್ಟಿಗೆ ವಿಚಾರಣೆ ಮಾಡುವ ನಿರೀಕ್ಷೆಯಿದ್ದು ಕವಿತಾ ಅವರ ವಿಚಾರಣೆ ನಡೆಸಬೇಕೆ ಎಂದು ಮತ್ತೆ ತೀರ್ಮಾನಿಸಲಿದೆ. 

ಇದಕ್ಕೂ ಮುನ್ನ ಕವಿತಾ ಅವರು ಮೊಬೈಲ್ ಫೋನ್‌ಗಳಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿರುವ ಇಡಿ ಅಧಿಕಾರಿಗಳು ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಮದ್ಯದ ಉದ್ಯಮಿಗಳೊಂದಿಗೆ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ನ್ಯಾಯಾಲಯದಲ್ಲಿ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com