ಹಿರೋಷಿಮಾ: ಉಕ್ರೇನ್ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ನಾನು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಸಮಸ್ಯೆಯಾಗಿ ನೋಡುತ್ತೇನೆಯೇ ಹೊರತು ರಾಜಕೀಯ ಅಥವಾ ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆಯಂತೆ ನೋಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ವರ್ಕಿಂಗ್ ಸೆಷನ್ನಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ಕಾನೂನು, ಸಾರ್ವಭೌಮತೆ ಮತ್ತು ಎಲ್ಲಾ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳ ವಿರುದ್ಧ ಸಾಮೂಹಿಕವಾಗಿ ಧ್ವನಿ ಎತ್ತಲು ಬಲವಾಗಿ ಒತ್ತಾಯಿಸಿದ ಮೋದಿ, ಯಾವುದೇ ಉದ್ವಿಗ್ನತೆ ಮತ್ತು ವಿವಾದವನ್ನು ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಶನಿವಾರ ನಡೆದ ಮಾತುಕತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಪರಿಹರಿಸಲು ಭಾರತ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತದೆ ಎಂದು ಪುನರುಚ್ಚರಿಸಿದರು.
ರಷ್ಯಾ ಆಕ್ರಮಣದ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಉಕ್ರೇನ್ನ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಝೆಲೆನ್ಸ್ಕಿ ಅವರು ಜಿ7 ನಾಯಕರಲ್ಲಿ ಮನವಿ ಮಾಡಿದ ನಂತರ ಪ್ರಧಾನಿ ಮೋದಿ ಅವರು ಹೀಗೆ ಹೇಳಿದ್ದಾರೆ.
Advertisement