ಒಂದು ರಾಷ್ಟ್ರ, ಒಂದು ಚುನಾವಣೆ: ಕರ್ನಾಟಕ ಚುನಾವಣೆ ಕಾರಣವೇ? ಜೂನ್‌ನಲ್ಲಿಯೇ ಸಿದ್ಧತಾ ಕಾರ್ಯ ಆರಂಭಿಸಿದ್ದ ಕೋವಿಂದ್!

ಒಂದು ರಾಷ್ಟ್ರ, ಒಂದು ಚುನಾವಣೆ' ಸಿದ್ದತಾ ಕಾರ್ಯವನ್ನು ಜೂನ್ ತಿಂಗಳಲ್ಲಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರಂಭಿಸಿದ್ದಾರೆ.ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಇದು ಪ್ರಾರಂಭವಾಯಿತು
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಮುಂಬೈ: 'ಒಂದು ರಾಷ್ಟ್ರ, ಒಂದು ಚುನಾವಣೆ' ಸಿದ್ದತಾ ಕಾರ್ಯವನ್ನು ಜೂನ್ ತಿಂಗಳಲ್ಲಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರಂಭಿಸಿದ್ದಾರೆ. ಸಂಸತ್ತಿನ ಹೊಸ ಕಟ್ಟಡ ಉದ್ಘಾಟಿಸಿದ ನಾಲ್ಕು ದಿನಗಳ ನಂತರ ಜೂನ್ 2 ರಂದು ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ ಪಿ ಕೆ ಮಿಶ್ರಾ ಇಬ್ಬರು ಭೇಟಿಯಾಗಿದ್ದರು. ಈ ಸಭೆಯಲ್ಲಿ ಕೋವಿಂದ್ ನೇತೃತ್ವದಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತಂತೆ ಮೊಟ್ಟ ಮೊದಲಿಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಇದು ಪ್ರಾರಂಭವಾಗಿದೆ. ಆ ಫಲಿತಾಂಶ ನಿಜವಾಗಿಯೂ ಪಕ್ಷವನ್ನು ಆಘಾತಗೊಳಿಸಿದೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಸಂಖ್ಯಾಬಲದ ಬಗ್ಗೆ ಹೆಚ್ಚು ಚಿಂತಿಸುವಂತೆ ಮಾಡಿದೆ. ಅದರಿಂದಾಗಿ ಏಕಕಾಲಿಕ ಚುನಾವಣೆಯ ಆಸ್ತ್ರ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. 

ಆದರೆ ಕೋವಿಂದ್ ಏಕೆ? ರಾಮನಾಥ್ ಕೋವಿಂದ್ ಅವರು ಕಾನೂನಿನಲ್ಲಿ ಪರಿಣತಿ ಹೊಂದಿದ್ದು, ಅಂತಹ ವಿಷಯಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೂ ಅಲ್ಲದೆ, ಮೋದಿ ಅವರಿಗೆ ಕೋವಿಂದ್ ಮೇಲೆ ನಂಬಿಕೆ ಇದೆ. "2024 ರ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಬಲವರ್ಧನೆಯನ್ನು ಸಡಿಲಗೊಳಿಸಲು ಏಕಕಾಲದಲ್ಲಿ ಚುನಾವಣೆಗೆ ಸಿದ್ಧಪಡಿಸುವಂತೆ ಮೋದಿ ಅವರು ತಮ್ಮ ವಿಶ್ವಾಸಾರ್ಹ ಪಕ್ಷದ ಕಾರ್ಯಕರ್ತರನ್ನು ಸದ್ದಿಲ್ಲದೆ ಕೇಳಿಕೊಂಡಿರುವುದಾಗಿ ಮೂಲಗಳು ಹೇಳಿವೆ. 

ಶುಕ್ರವಾರ, ಕೋವಿಂದ್ ಅವರನ್ನು ಔಪಚಾರಿಕವಾಗಿ 'ಒಂದು ರಾಷ್ಟ್ರ, ಒಂದು ಚುನಾವಣೆಯ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಅದರ ಸದಸ್ಯರ ಹೆಸರನ್ನು ಮರುದಿನ ಪ್ರಕಟಿಸಲಾಯಿತು. ಭಾನುವಾರ, ಸಮಿತಿಯ ಪೂರ್ವಸಿದ್ಧತಾ ಕಾರ್ಯಕ್ಕಾಗಿ ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿಗಳು ಕೋವಿಂದ್ ಅವರನ್ನು ಭೇಟಿಯಾದರು. ಆದರೆ ಜೂನ್ 2 ರಿಂದಲೂ ರಾಮನಾಥ್ ಕೋವಿಂದ್ ಈ ನಿಟ್ಟಿನಲ್ಲಿ ಪೂರ್ವಸಿದ್ಧತಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಕೋವಿಂದ್ ಅವರ ಸಾಮಾಜಿಕ ಮಾಧ್ಯಮದ ಟೈಮ್‌ಲೈನ್‌, ಅವರು ಕಳೆದ ಮೂರು ತಿಂಗಳೊಳಗೆ ಕನಿಷ್ಠ 10 ಗವರ್ನರ್‌ಗಳನ್ನು ಭೇಟಿಯಾಗಿ ಹೇಗೆ ಸಿದ್ಧತಾ ಕಾರ್ಯ ಆರಂಭಿಸಿದರು ಎಂಬುದನ್ನು ಸೂಚಿಸುತ್ತದೆ. ಮಾಜಿ ರಾಷ್ಟ್ರಪತಿ ರಾಜಭವನಗಳಿಗೆ  ಭೇಟಿ ರಾಜ್ಯಪಾಲರು ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜೂನ್ 9 ಮತ್ತು ಆಗಸ್ಟ್ 29 ರ ನಡುವೆ ಅವರು ಕನಿಷ್ಟ 10 ಗವರ್ನರ್‌ಗಳು, ಆಡಳಿತಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಏಕಕಾಲಿಕ ಚುನಾವಣೆ ನಡೆಸುವ ತನ್ನ ಪ್ರಸ್ತಾವನೆಗಳನ್ನು ದೃಢಪಡಿಸುವ ಕೆಲಸವನ್ನು  ಸರ್ಕಾರ ಈಗಾಗಲೇ ಪ್ರಾರಂಭಿಸಿದೆ. ಸೆಪ್ಟೆಂಬರ್ 18 ರಿಂದ 22 ರವರೆಗಿನ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅದರ ವರದಿಯನ್ನು ಸಹ ಮಂಡಿಸಬಹುದು.

2025 ರ ಸುಮಾರಿಗೆ ಅವಧಿ ಮುಗಿಯುವ (ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ) ಅಸೆಂಬ್ಲಿಗಳನ್ನು ವಿಸರ್ಜಿಸಲಾಗುವುದು, ಆದರೆ ಇತ್ತೀಚಿಗೆ ನಡೆದ  ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಂತಹ  ರಾಜ್ಯಗಳ ಅಧಿಕಾರಾವಧಿಯನ್ನು ಒಂದು ವರ್ಷದ ವಿಸ್ತರಣೆ ಪಡೆಯಲಿದ್ದು, 2029ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಬಹುದು ಎಂದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ. 

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರಿಂದ  INDIA ಒಕ್ಕೂಟವನ್ನು ಮುರಿಯಬಹುದೆಂದು  ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಮೈತ್ರಿ ಮಾಡಿಕೊಳ್ಳುವುದು ಕಷ್ಟ, ಏಕೆಂದರೆ ಪ್ರತಿ ಪಕ್ಷವು ಮೊದಲು ತನ್ನ ಸ್ಥಳೀಯ ಹಿತಾಸಕ್ತಿಗಳನ್ನು ರಕ್ಷಿಸಲು ಬಯಸುತ್ತದೆ. ದೆಹಲಿ, ಪಂಜಾಬ್ ಮತ್ತು ಇತರೆಡೆಗಳಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವೆ ಇದೇ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಕಾಂಗ್ರೆಸ್ ಜೊತೆ ಇರುವ ಪ್ರಾದೇಶಿಕ ಪಕ್ಷಗಳು ಜಗಳವಾಡುತ್ತವೆ ಎಂಬುದು ಕೇಸರಿ ಪಕ್ಷ ಚೆನ್ನಾಗಿ ಅರಿತಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com