ಹೈದರಾಬಾದ್: ದೇಶವು "ಗಂಭೀರ ಆಂತರಿಕ ಸವಾಲುಗಳನ್ನು" ಎದುರಿಸುತ್ತಿದೆ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಹಿಂಸಾತ್ಮಕ ಘಟನೆಗಳು ಪ್ರಗತಿಪರ ಮತ್ತು ಜಾತ್ಯತೀತ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತಿವೆ ಮತ್ತು ಬಿಜೆಪಿ "ಬೆಂಕಿಗೆ ತುಪ್ಪ" ಸೇರಿಯುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.
ಇಂದು ಪುನರ್ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ)ಯ ಮೊದಲ ಸಭೆಯಲ್ಲಿ ಮಾತನಾಡಿದ ಖರ್ಗೆ ಅವರು, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಆಹಾರ ಭದ್ರತೆಯ ಹಕ್ಕನ್ನು ಪಡೆಯಲು ಜಾತಿ ಸಮೀಕ್ಷೆಯೊಂದಿಗೆ ಜನಗಣತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಪಕ್ಷ ಒತ್ತಾಯಿಸುತ್ತದೆ ಎಂದರು.
ಇಂಡಿಯಾ ಮೈತ್ರಿಕೂಟದ 27 ಪಕ್ಷಗಳು ಮೂಲಭೂತ ವಿಷಯಗಳಲ್ಲಿ ಒಗ್ಗಟ್ಟಾಗಿ ನಿಂತಿವೆ ಎಂದು ಅವರು ಹೇಳಿದರು.
ಮೂರು ಯಶಸ್ವಿ ಸಭೆಗಳ ನಂತರ, ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ "ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರದ" ವಿರುದ್ಧ ಹೋರಾಡಲು ಸಜ್ಜಾಗುತ್ತಿದೆ. ಈ ಬೆಳವಣಿಗೆಯಿಂದ ವಿಚಲಿತವಾಗಿರುವ ಬಿಜೆಪಿ, ವಿರೋಧ ಪಕ್ಷಗಳ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನವು ಆಡಳಿತ ಪಕ್ಷದ ಉದ್ದೇಶಗಳ ಬಗ್ಗೆ ಆತಂಕ ಉಂಟುಮಾಡುತ್ತಿದೆ ಎಂದ ಖರ್ಗೆ, ದೇಶವು ಇಂದು ಅನೇಕ ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಹಣದುಬ್ಬರ, ನಿರುದ್ಯೋಗ, ಮಣಿಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿ ಸರ್ಕಾರ "ಸಂಪೂರ್ಣ ವಿಫಲವಾಗಿದೆ" ಎಂದು ಆರೋಪಿಸಿದರು.
Advertisement