ನವದೆಹಲಿ: ಚುನಾವಣಾ ಬಾಂಡ್ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಎಲ್ಲರಿಗೂ ವಿಷಾದ ಉಂಟಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಎಎನ್ಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗಳಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಲಾಗಿತ್ತು. ಆದರೆ ವಿಪಕ್ಷಗಳು ಆರೋಪಗಳನ್ನು ಮಾಡಿದ ಬಳಿಕ ಪಲಾಯನ ಮಾಡಲು ಬಯಸುತ್ತಿವೆ ಎಂದು ಮೋದಿ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ಗಳ ಯೋಜನೆಗೆ ತಮ್ಮ ಮೊದಲ ವಿವರವಾದ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಈ ಯೋಜನೆಯನ್ನು "ಯಶಸ್ಸಿನ ಕಥೆ" ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಈ ಯೋಜನೆ ಯಾರು ಕೊಡುಗೆ ನೀಡಿದ್ದರು ಎಂಬುದನ್ನು ತಿಳಿಯಲು ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆಯನ್ನು ಸುಧಾರಿಸುವುದಕ್ಕೆ ಹಲವು ಅವಕಾಶಗಳಿವೆ ಎಂದೂ ಮೋದಿ ಹೇಳಿದ್ದಾರೆ.
ಸಂಬಂಧಿತ ಮಸೂದೆಯನ್ನು ಅಂಗೀಕರಿಸಿದಾಗ ಚುನಾವಣಾ ಬಾಂಡ್ಗಳ ಯೋಜನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು ಮತ್ತು ಈಗ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕೆಲವರು ಅದನ್ನು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಯೋಜನೆಯ ಮೂಲಕ ದೇಣಿಗೆ ನೀಡಿದ 3,000 ಕಂಪನಿಗಳ ಪೈಕಿ 26 ಕಂಪನಿಗಳು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳಿಂದ ಕ್ರಮವನ್ನು ಎದುರಿಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಈ 26 ಕಂಪನಿಗಳಲ್ಲಿ 16 ಮಂದಿ ಚುನಾವಣಾ ಬಾಂಡ್ಗಳನ್ನು ತೆಗೆದುಕೊಂಡಿವೆ. "ಇವುಗಳಲ್ಲಿ (16 ಕಂಪನಿಗಳು) ಶೇಕಡಾ 37 ರಷ್ಟು ಮೊತ್ತವು ಬಿಜೆಪಿಗೆ ಮತ್ತು ಶೇಕಡಾ 63 ರಷ್ಟು ಬಿಜೆಪಿಯನ್ನು ವಿರೋಧಿಸುವ ವಿರೋಧ ಪಕ್ಷಗಳಿಗೆ ಹೋಗಿವೆ.
ಈ ವರ್ಷ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳ ಯೋಜನೆಯನ್ನು ರದ್ದುಗೊಳಿಸಿತು ಮತ್ತು ಇದು ಅಸಾಂವಿಧಾನಿಕ ಎಂದು ಹೇಳಿದೆ. ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಚುನಾವಣಾ ಬಾಂಡ್ಗಳ ಯೋಜನೆಗೆ ಗುರಿಯಾಗಿಸುತ್ತಿವೆ.
Advertisement