ಪುಣೆ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಶರದ್ಚಂದ್ರ ಪವಾರ್) ಗುರುವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆ 'ಶಪಥ ಪತ್ರ'ವನ್ನು ಬಿಡುಗಡೆ ಮಾಡಿದ್ದು, ಜಾತಿ ಗಣತಿಗೆ ಒಲವು ಮತ್ತು ರೈತರ ಕಲ್ಯಾಣಕ್ಕಾಗಿ ಪ್ರತ್ಯೇಕ ಆಯೋಗ, ಅಪ್ರೆಂಟಿಸ್ಶಿಪ್, ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ಸೇರಿದಂತೆ ಹಲವು ಭರವಸೆ ನೀಡಿದೆ.
ಮಾಜಿ ಕೇಂದ್ರ ಸಚಿವ ಶರದ್ ಪವಾರ್ ನೇತೃತ್ವದ ಪಕ್ಷ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ ಸ್ಥಾನಮಾನವನ್ನು ಬೆಂಬಲಿಸುತ್ತದೆ ಮತ್ತು 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಯನ್ನು ತಿರಸ್ಕರಿಸುತ್ತದೆ ಎಂದು ಹೇಳಿದೆ.
ಎನ್ಸಿಪಿ(ಎಸ್ಪಿ) ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ಆರ್ಸಿ), ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ) ಮತ್ತು ಇತರವುಗಳನ್ನು ಪರಿಶೀಲಿಸುತ್ತದೆ ಮತ್ತು ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ ಎಂದು ಹೇಳಿದೆ.
ಮೀಸಲಾತಿ ಮೇಲಿನ 50 ಪರ್ಸೆಂಟ್ ಮಿತಿಯನ್ನು ಹೆಚ್ಚಿಸಲು ನಾವು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುತ್ತೇವೆ. ನಾವು ಸರ್ಕಾರಿ ವಲಯಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ನಿಷೇಧಿಸುತ್ತೇವೆ ಮತ್ತು ಗುತ್ತಿಗೆ ಕಾರ್ಮಿಕರ ಪ್ರಯೋಜನಗಳನ್ನು ಕಾನೂನುಬದ್ಧವಾಗಿ ರಕ್ಷಿಸುತ್ತೇವೆ ಎಂದು ಮಹಾರಾಷ್ಟ್ರ ಎನ್ಸಿಪಿ(ಎಸ್ಪಿ) ಅಧ್ಯಕ್ಷ ಜಯಂತ್ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಸಮ್ಮುಖದಲ್ಲಿ ಶಪಥ ಪತ್ರ ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಐದು "ನ್ಯಾಯ" ಗ್ಯಾರಂಟಿಗಳನ್ನು ಅನುಮೋದಿಸುವುದಾಗಿ ಎನ್ಸಿಪಿ (ಎಸ್ಪಿ) ಹೇಳಿದೆ.
Advertisement