ಭೋಪಾಲ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ತಾಯಿಯ ಸಂಪತ್ತನ್ನು ರಕ್ಷಿಸಿಕೊಳ್ಳಲು ಅನುವಂಶಿಕ ಆಸ್ತಿ ತೆರಿಗೆ ಕಾನೂನನ್ನು ರದ್ದುಗೊಳಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ನಿಧನದ ನಂತರ ಆಕೆಯ ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜೀವ್ ಗಾಂಧಿ ಅನುವಂಶಿಕ ಆಸ್ತಿ ತೆರಿಗೆ ಕಾನೂನನ್ನು ರದ್ದುಗೊಳಿಸಿದರು ಎಂದು ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಹಾಗೂ ರಾಜೀವ್ ಗಾಂಧಿ, ಅನುವಂಶಿಕ ಆಸ್ತಿ ಮಕ್ಕಳಿಗೆ ವರ್ಗಾವಣೆಯಾಗುವುದಕ್ಕೆ ತೆರಿಗೆ ವಿಧಿಸುವ ನೀತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಪ್ರಸ್ತಾವನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಮೋದಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮೋದಿ ಸುಳ್ಳುಗಾರ ಎಂದು ಹೇಳಿದೆ.
ವಿರೋಧ ಪಕ್ಷವು 1985 ರಲ್ಲಿ ಉತ್ತರಾಧಿಕಾರ ತೆರಿಗೆಯನ್ನು ರದ್ದುಗೊಳಿಸುವ ಕುರಿತು ಆಗಿನ ಹಣಕಾಸು ಸಚಿವ ವಿಪಿ ಸಿಂಗ್ ಅವರ ಬಜೆಟ್ ಭಾಷಣವನ್ನು ಉಲ್ಲೇಖಿಸಿದೆ.
ಮಧ್ಯಪ್ರದೇಶದ ಮೊರೆನಾ ನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜನರು ಮತ್ತು ಅವರನ್ನು ಲೂಟಿ ಮಾಡುವ ಪಕ್ಷದ ಯೋಜನೆಗಳ ನಡುವೆ ನಾನು ಗೋಡೆಯಂತೆ ನಿಂತಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆಸ್ತಿಗೆ ಸಂಬಂಧಿಸಿದ ಉತ್ತರಾಧಿಕಾರ ತೆರಿಗೆ ಕಾನೂನು ರದ್ದತಿಯಿಂದ ಲಾಭ ಪಡೆದ ಕಾಂಗ್ರೆಸ್ ಈಗ ಅದನ್ನು ಮತ್ತೆ ದೇಶದ ಜನರ ಮೇಲೆ ಹೇರಲು ಹೊರಟಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಆಸ್ತಿಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಆಸ್ತಿಯ ಉತ್ತರಾಧಿಕಾರ ತೆರಿಗೆಯ ಮೂಲಕ ಕಿತ್ತುಕೊಳ್ಳಲಿದೆ ಎಂದು ಮೋದಿ ಹೇಳಿದರು.
Advertisement